ಜಾತ್ಯಾತೀತ ಅಮೇರಿಕಾದಲ್ಲಿ ಜಾತೀಯತೆ?!

ಶೀರ್ಷಿಕೆಯನ್ನು ನೋಡಿ ಜಾತಿಗಳೇ ಇಲ್ಲದ ಅಮೇರಿಕಾದಲ್ಲಿ ಇದೇನಪ್ಪಾ? ಎಂದೋ ಅಥವಾ ದೇವೇಗೌಡ ಬೆಂಬಲಿಗರು ಅಮೇರಿಕಾದಲ್ಲಿ ಹೇಗೆ ಸೇರಿಕೊಂಡರು ಎಂದೋ ಆಶ್ಚರ್ಯಪಡುತ್ತಿರುವಿರಾ? ದೇವೇಗೌಡರ ಚೆಲುವ, ಚೆನ್ನಿಗ, ಬಿಸಿಲ್ಗುದುರೆಗಳಿಗೆ ಹೆಚ್೧ಬಿ ಸಿಕ್ಕದು ಬಿಡಿ! ಇದು ಜಾತಿಗಳಿಲ್ಲದ ಬಿಳಿ/ಕರಿಯರ ಕುರಿತಾಗಲೀ ದೇವೇಗೌಡರ ಪಟಾಲಂ ಕುರಿತಾದ ಲೇಖನವಾಗಲೀ ಅಲ್ಲ. ಆದರೆ "ಜಾತಿಗಳೇ ಎಲ್ಲಾ" ಎಂದುಕೊಂಡಿರುವ ಭಾರತೀಯ ಮೂಲದ ಅಮೇರಿಕನ್ನರ ಕುರಿತಾದುದಾಗಿದೆ!

ಸಾಮಾನ್ಯವಾಗಿ ಇಲ್ಲಿನ ಭಾರತೀಯರು ತಮ್ಮ ಅಲ್ಪಸಂಖ್ಯೆಯ ಕಾರಣದಿಂದಲೋ, ವಿಶಿಷ್ಟ ಸಂಸ್ಕೃತಿಯ ದೆಸೆಯಿಂದಲೋ ಅಷ್ಟಾಗಿ ಮುಖ್ಯವಾಹಿನಿಯಲ್ಲಿ ಬೆರೆಯದೇ ತಮ್ಮ ತಮ್ಮ ಭಾರತೀಯ ಮೂಲದ ಸ್ನೇಹಿತರುಗಳನ್ನೇ ಕಂಡುಕೊಂಡು ಸ್ನೇಹಸಂಬಂಧಗಳನ್ನು ಹೊಂದಿರುತ್ತಾರೆ. ಹಾಗೆಯೇ ನನಗೂ ಕೂಡ ಅನೇಕ ಭಾರತೀಯ ಮೂಲದ ಸ್ನೇಹಿತರಿದ್ದಾರೆ. ಅವರಲ್ಲಿ ಅನೇಕರು ಹೆಚ್ಚಿನದಾಗಿ ಆಂಧ್ರಪ್ರದೇಶದವರಾಗಿದ್ದಾರೆ. ಎಪ್ಪತ್ತರ ದಶಕ ಭಾರತೀಯ ಮೂಲದ ಡಾಕ್ಟರರುಗಳ ವಲಸೆಯ ಅಲೆಯಾದರೆ, ತೊಂಬತ್ತರ ದಶಕ ಐ.ಟಿ. ವಲಸಿಗರ ಅಲೆಯಾಯಿತು. ಈ ಅಲೆಗಳಲ್ಲಿ ಬಂದು ನೆಲೆಸಿರುವ ಭಾರತೀಯ ಮೂಲದವರು ತಮ್ಮ ತಮ್ಮ ಭಾಷೆಗಳ/ರಾಜ್ಯಗಳ ಹೆಸರಿನಲ್ಲಿ ಸಂಘ, ಸಂಸ್ಥೆಗಳನ್ನು ಸ್ಥಾಪಿಸಿಕೊಂಡು ತಮ್ಮ ಸಂಸ್ಕೃತಿಯ ನೆನಹನ್ನು ತಮ್ಮತಮ್ಮಲ್ಲೇ ಹಂಚಿಕೊಳ್ಳುತ್ತಾರೆ. ಹೀಗಿದ್ದ ಸಂಘ/ಸಂಸ್ಥೆಗಳಲ್ಲಿ ತಮ್ಮ ತಮ್ಮ ಪ್ರೋತ್ಸಾಹಕರ ಸಂಖ್ಯೆ ಏರಿದಂತೆ ನಿಧಾನವಾಗಿ ಭಾರತದ ಇತರೆ ಸಂಸ್ಕೃತಿಗಳಾದ ಜಾತೀಯತೆ, ಗುಂಪುಗಾರಿಕೆ, ರಾಜಕೀಯ, ಪಕ್ಷಭೇದಗಳು ಏರುತ್ತಿವೆ.

ವೈಯುಕ್ತಿಕವಾಗಿ ಇಂತಹ ಯಾವುದೇ ಸಂಘಗಳೊಂದಿಗೆ ಸಂಬಂಧವಿರದ ನನಗೆ ಪ್ರತ್ಯಕ್ಷ ಅನುಭವವಾಗಿರದಿದ್ದರೂ ಪರೋಕ್ಷವಾಗಿ ಆಗಿದೆ. ಕೆಲಸದ ನಿಮಿತ್ತ ಪ್ರತಿ ವಾರವೂ ನ್ಯೂಯಾರ್ಕ್ ನಗರಕ್ಕೆ ಹೋಗುವ ನಾನು, ಕಳೆದ ಬೇಸಿಗೆಯಲ್ಲಿ ನನ್ನ ತೆಲುಗು ಮಿತ್ರರನ್ನು ಕಾಣುವ ಎಂದು ಒಂದು ವೀಕೆಂಡ್ ಅಲ್ಲಿಯೇ ಉಳಿದುಕೊಂಡೆನು. ಅವರೆಲ್ಲ ನನ್ನನ್ನು "ಈ ದಿನ ಆಂಧ್ರದ ಮಾಜಿ ಮುಖ್ಯಮಂತ್ರಿ ಚಂದ್ರಬಾಬುನಾಯ್ಡುಗೆ ಒಂದು ಸನ್ಮಾನವನ್ನು ಮಾಡುತ್ತಿದ್ದೇವೆ ನಡೆ ಹೋಗುವ" ಎಂದು ಕರೆದುಕೊಂಡು ಹೋದರು. ಎಲ್ಲಿ ನೋಡಿದರೂ ಹಳದಿ ವಸ್ತ್ರವನ್ನು ಹಣೆಗೆ ಕಟ್ಟಿಕೊಂಡಿದ್ದ ಜನರು ಕಾಣುತ್ತಿದ್ದರು. ಯಾವುದೋ ಒಂದು ಜಾತಿಯವರು ವೃತಗಳನ್ನೋ ಹಬ್ಬಗಳನ್ನೋ ಆಚರಿಸುವಾಗ ಹಳದಿ ಬಟ್ಟೆ ತೊಡುವುದನ್ನು ಬೆಂಗಳೂರಿನಲ್ಲಿ ನೋಡಿದ್ದೆನು. ಆ ರೀತಿಯ ವೃತವನ್ನು ಈ ಹಳದಿ ಪಟ್ಟಿ ಜನರು ಆಚರಿಸುತ್ತಿರಬಹುದೆಂದುಕೊಂಡು ಸುಮ್ಮನಾದರೂ ಅದು ನನ್ನನ್ನು ಭಾಧಿಸುತ್ತಿದ್ದಿತು. ಪಕ್ಕದಲ್ಲಿದ್ದ ನನ್ನ ಸ್ನೇಹಿತನನ್ನು ಮೆಲ್ಲಗೆ ಕೇಳಿದಾಗ ಅದು ತೆಲುಗುದೇಶಂ ಪಕ್ಷದ ಬಣ್ಣವೆಂದು ಹೇಳಿದನು! ನಂತರ ತಿಳಿದುದುದೇನೆಂದರೆ ಅದೊಂದು ತೆಲುಗು ಕಂ ದೇಶಂ ಸಭೆಯೆಂದೂ, ಚಂದ್ರಬಾಬುನಾಯ್ಡು ತಮ್ಮ ಪಕ್ಷಕ್ಕೆ ಅಮೇರಿಬೆಂಬಲಿಗರಿಂದ ಹಣ ಶೇಖರಿಸಲು ಒಂದು ತಿಂಗಳ "ಫಂಡ್ ರೈಸಿಂಗ್" ಕ್ಯಾಂಪೇನ್ ಗೆ ಬಂದಿರುವುದಾಗಿಯೂ, ಮತ್ತವರಿಗೆ ಇಲ್ಲಿ ತಿರುಗಲು ಒಬ್ಬ ಅಭಿಮಾನಿ ಚಾರ್ಟರ್ಡ್ ಫ್ಲೈಟ್ ಅನ್ನು ಇಪ್ಪತ್ತು ದಿನಗಳಿಗೆ ಕೊಡಿಸಿರುವುದಾಗಿಯೂ ಮತ್ತು ಈ ರೀತಿಯ ಸಾಕಷ್ಟು ಅಭಿಮಾನಿಗಳು ಟಿಕೇಟ್ ಆಕಾಂಕ್ಷಿಗಳಾಗಿ, ರಾಜ್ಯಪ್ರಶಸ್ತಿ ಆಕಾಂಕ್ಷಿಗಳಾಗಿ, ಇಲ್ಲವೇ ಮತ್ಯಾವುದೋ ಉದ್ದೇಶದ ಆಕಾಂಕ್ಷಿಗಳಾಗಿ ಸಾಕಷ್ಟು ಬೆಂಬಲವನ್ನು ನಾಯ್ಡುಗಳಿಗೆ ತೋರುತ್ತಾರಂತೆ! ಅದಕ್ಕೆ ಪೂರಕವಾಗಿ ಆ ಸಭೆಯಲ್ಲಿ ಒಬ್ಬ ಉದ್ಯಮಿ, ಬಹುಶಃ ಟಿಕೆಟ್ ಆಕಾಂಕ್ಷಿ ಇರಬಹುದೇನೋ, ಒಂದು ಚಿನ್ನದ ಗದೆ ಮತ್ತು ಕಿರೀಟವನ್ನು ನಾಯ್ಡುಗೆ ಅರ್ಪಿಸಿದನು.

ನಾಯ್ಡುರವರಿಗೆ ಏನೆನ್ನಿಸಿತೋ ಕೂಡಲೇ ತಮ್ಮ ಪಕ್ಕದಲ್ಲಿ ಕೂತಿದ್ದ ಎಡಿಸನ್ ಸಿಟಿ ಮೇಯರ್ ಅವರಿಗೆ ಆ ಕಿರೀಟವನ್ನು ತೊಡಿಸಿ, ಗದೆಯನ್ನು ಕೂಡ ಅವರ ಹೆಗಲಿಗೇರಿಸಿದರು! ಇದರಿಂದ ಆನಂದಗೊಂಡ ಎಡಿಸನ್ ಮೇಯರ್ ಆ ಕೊಡುಗೆಗಳನ್ನು ತನ್ನ ಮನೆಗೆ ಹೊತ್ತೊಯ್ದರೆ, ಕೊಟ್ಟ ಉದ್ಯಮಿ ಪೆಚ್ಚಾಗಿದ್ದ! ಅಂದು ನನಗೆ ಅಪ್ಪಟ ಭಾರತದ ಒಂದು ರಾಜಕೀಯ ಸಭೆಯ ಅನುಭವ ಬಹುಕಾಲದ ನಂತರ ಆಗಿತ್ತು. ಮರುದಿನ ಮೋಟಾರ್ ಸೈಕಲ್ ರ್‍ಯಾಲಿ ಕೂಡ ಇರುವುದೆಂದೂ, ರ್‍ಯಾಲಿಯ ನಂತರ ಉಚಿತ "ವೈನ್ ಅಂಡ್ ಡೈನ್" ಪಾರ್ಟಿ ಇರುವುದೆಂದನು. ಸಾಮಾನ್ಯವಾಗಿ ಮೋಟಾರ್ ಸೈಕಲ್ಲುಗಳನ್ನು ಹೊಂದಿರದ ಇಲ್ಲಿನ ಭಾರತೀಯರಲ್ಲಿ ಅದೆಷ್ಟು ಮಂದಿ ಆ ರ್‍ಯಾಲಿಗೆ ಬರುವರೋ ಎಂದು ನಾನು ಸಂದೇಹವನ್ನು ವ್ಯಕ್ತಪಡಿಸಿದ್ದಕ್ಕೆ, ನನ್ನ ಮಿತ್ರನು ರ್‍ಯಾಲಿಗಾಗಿಯೇ ಇಲ್ಲಿನ ಮೋಟಾರ್ ಸೈಕಲ್ ಕ್ಲಬ್ಬುಗಳನ್ನು ಬುಕ್ ಮಾಡಿಕೊಂಡಿದ್ದು, ಈ ರ್‍ಯಾಲಿಗೆ ಬರುವವರೆಲ್ಲಾ ಬಿಳಿ/ಕರಿಯ ಅಮೇರಿಕನ್ನರೆಂದನು! ಒಂದು ರೀತಿ ಭಾರತೀಯ ಸಿನೆಮಾಗಳಲ್ಲಿ ಬಿಳಿ ಸಹನಟ/ನಟಿಯರ ನೃತ್ಯಗಳಿರುವಂತೆ! ಭಾರತದ ಚುನಾವಣಾ ಸಮಯದಲ್ಲಿ ಹೆಂಡ, ಬಿರ್ಯಾನಿ ಹಂಚುವುದರ ಸುಧಾರಿತ ಕ್ರಮದಂತೆ, ಅಂದಿನ ಸಭೆಯಲ್ಲಿ ಕೂಡಾ ಉಚಿತ ವೈನ್ ಇದ್ದಿತು!

ಮೊನ್ನೆ ಮತ್ತದೇ ಸ್ನೇಹಿತರನ್ನು ಕಾಣಲು ಮತ್ತೆ ನ್ಯೂಜೆರ್ಸಿಗೆ ಹೋಗಿದ್ದೆನು. ಈ ಬಾರಿ ತೆಲುಗು ನಟ ಬಾಲಕೃಷ್ಣನ ’ಪಾಂಡುರಂಗ’ ಎಂಬ ಸಿನಿಮಾ ಇಲ್ಲಿಯೂ ಬಿಡುಗಡೆಯಾಗಿ ಅದರ ಪ್ರಚಾರಕ್ಕೆ ಖುದ್ದು ಬಾಲಕೃಷ್ಣ ಬಂದಿದ್ದನು. ಅವನ ಸಿನಿಮಾ ಬಿಡುಗಡೆಯ ದಿನ ಮತ್ತದೇ ಹಳದಿ ಪಟ್ಟಿಯ ಅಭಿಮಾನಿಗಳು ಹಳದಿ ಬಾವುಟಗಳನ್ನ್ಹಿಡಿದು ಬೆಂಬಲವನ್ನು ವ್ಯಕ್ತಪಡಿಸಿದರೆ, ಚಿರಂಜೀವಿ ಅಭಿಮಾನಿಗಳು ಕಪ್ಪು ಪಟ್ಟಿ, ಬಾವುಟಗಳನ್ನ್ಹಿಡಿದು ವಿರೋಧವನ್ನು ತೋರಿಸಿದ್ದರು. ವಿಚಾರಿಸಲಾಗಿ ಕಮ್ಮ ಜಾತಿಯ ಬಾಲಕೃಷ್ಣನನ್ನು ಕಾಪು ಜಾತಿಯವರು ವಿರೋಧಿಸುತ್ತಿದ್ದಾರೆ ಎಂದು ತಿಳಿಯಿತು. ಅದಕ್ಕೂ ಮುನ್ನ ಚಿರಂಜೀವಿಯ ಮುನ್ನಾಬಾಯಿಗೂ ಇದೇ ಮರ್ಯಾದೆ ಸಿಕ್ಕಿತ್ತಂತೆ! ಹಾಗೆಯೇ ’ಪಾಂಡುರಂಗ’ನಿಗೆ ಡ್ಯಾಲಸ್ ನ ಯಾವುದೋ ಪಾರ್ಕಿನಿಂದ ಥಿಯೇಟರ್ ವರೆಗೆ ಸೈಕಲ್/ಬೈಕ್ ರ್‍ಯಾಲಿಯೊಂದಿಗೆ, ಎರಡು ಸಾವಿರ ಕಾರುಗಳ ಪೆರೇಡ್ ನಡೆದು ಬಾಲಕೃಷ್ಣನ ಬರ್ತಡೇ ಆಚರಣೆ ನಡೆಯಿತಂತೆ! ಇನ್ನು ಇದು ಭಾರತೀಯ ಸಿನೆಮಾಗಳ ವಿದೇಶೀ ಬಿಡುಗಡೆಯ ಸಂಪ್ರದಾಯವಾಗಬಹುದೇನೋ?

ಇಲ್ಲಿನ ತೆಲುಗು ಸಂಘಗಳು ತಾನಾ, ಬಾನಾ ಗಾನಾಗಳೆಂದು ಕಮ್ಮ, ರೆಡ್ಡಿ, ಕಾಪು ಜಾತಿಗಳಿಗನುಗುಣವಾಗಿ ಒಂದೊಂದು ತಲೆಯೆತ್ತಿವೆ!

ಹಾಗೆಯೇ ಆಂಧ್ರದಲ್ಲಿ ಚುನಾವಣೆಗಳಾದರೆ ಇಲ್ಲಿನ ತೆಲುಗರ ಬಿ.ಪಿ ಏರುತ್ತದೆ. ಆ ಬಿ.ಪಿ.ಯನ್ನು ಇಳಿಸಲು ಹಳದಿ ಪಟ್ಟಿ ಕಟ್ಟಿಕೊಂಡು ಕ್ಯಾಲಿಫೋರ್ನಿಯಾದ ಉದ್ದಗಲಕ್ಕೂ ಸೈಕಲ್ ಹೊಡೆಯುತ್ತಾರೆ!

ಇದು ಮೇಲ್ನೋಟಕ್ಕೆ ಸಿನಿಮಾ ಅಭಿಮಾನಿಗಳಂತೆ ಕಂಡರೂ ಇಲ್ಲಿ ಜಾತಿಗಳೇ ಪ್ರಮುಖವಾಗಿವೆ. ಕಮ್ಮ ಜಾತಿಯ ಪ್ರಾಬಲ್ಯವನ್ನು ಮುರಿಯಲು ಚಿರಂಜೀವಿ ಕಾಪು ಜನಗಳನ್ನು ಬೆಂಬಲಿಸಿ ರಾಜಕೀಯ ಎಂಟ್ರ್‍ಇಯ ಸುದ್ದಿಯನ್ನು ತೇಲಿ ಬಿಡುತ್ತಿದ್ದಂತೆಯೇ ಈ ಜಾತೀಯತೆಯ ವಿಷ ಇಲ್ಲಿನ ತೆಲುಗು ಮೂಲದ ಭಾರತೀಯರನ್ನು ಬಹುವಾಗಿ ಆವರಿಸಿಕೊಂಡು ಬಿಟ್ಟಿವೆ. ಇದು ಕೇವಲ ತೆಲುಗರ ಕುರಿತಾಗಿ ಅಷ್ಟೇ ಅಲ್ಲ, ಉತ್ತರ ಭಾರತೀಯರಲ್ಲಿ ಇದು ಇನ್ನೂ ಭಯಂಕರವಾಗಿದೆ. ಅಮೇರಿಕಾದಲ್ಲಿದ್ದರೂ ಅವರು ತಮ್ಮ ರಾಜ್ಯದ ಅನ್ಯಜಾತಿಯವನಲ್ಲಿ ಸ್ನೇಹವನ್ನೂ ಮಾಡುವುದಿಲ್ಲ! ಬಿಹಾರೀ ಬ್ರಾಹ್ಮಣರು ಬನಿಯಾ ಜನಗಳನ್ನು ಸ್ವಲ್ಪ ದೂರವೇ ಇಡುತ್ತಾರೆ. ನನ್ನ ಆಪ್ತ ಬಿಹಾರೀ ಸ್ನೇಹಿತನ ಮನೆಗೆ ಅವರ ಸಂಬಂಧಿ ಶತ್ರುಘ್ನ ಸಿನ್ಹಾರವರು ಬಂದಾಗ ನಡೆದ ಗುಂಡಿನ ಪಾರ್ಟಿಯಲ್ಲಿ ಈ ವಿಷಯ ನನಗೆ ತಿಳಿಯಿತು. ಬಿಹಾರಿ ಸಂಘಗಳಲ್ಲಿ ಇದು ಇನ್ನೂ ವಿಕೋಪಕ್ಕೆ ಹೋಗುತ್ತದೆಂದು ನನ್ನ ಸ್ನೇಹಿತನು ತಿಳಿಸಿದನು.

ಇದೆಲ್ಲವನ್ನು ಅರಿಯದೇ ನೋಡುವ ಇತರೇ ಅಮೇರಿಕನ್ನರು ಈ ಭಾರತೀಯರುಗಳೇ ವಿಚಿತ್ರ ಎಂದು ಮೂಗುಮುರಿಯುತ್ತಾರೆ! ಅದಕ್ಕೆ ಇರಬೇಕು, ಅನೇಕ ವಿದೇಶೀಯರು ಭಾರತೀಯರೆಂದರೆ ಪುಂಗಿ ನುಡಿಸಿ ಹಾವಾಡಿಸುವವರು, ಕೋತಿಗಳನ್ನು ಕುಣಿಸುವವರು, ಇಲಿ ಹಿಡಿದು ತಿನ್ನುವವರು, ಕತ್ತೆ, ನಾಯಿಗಳೊಂದಿಗೆ ಮುದುವೆಯಾಗುವವರು (ಮಳೆಯಾಗಲೆಂದೋ, ಪಾಪ ಪರಿಹಾರದ ನಿಮಿತ್ತವಾಗಿಯೋ ಇರಬಹುದು) ಇನ್ನೂ ಏನೇನೋ ವಿಚಿತ್ರ ಭಾರತೀಯ ಸುದ್ದಿಗಳನ್ನು ಕೇಳಿ, ಅದಕ್ಕೆ ತದ್ವಿರುದ್ಧವಾಗಿ ಇಲ್ಲಿನ ಭಾರತೀಯರು ಶುದ್ಧ ಸಸ್ಯಾಹಾರಿಗಳಾಗಿಯೋ, ಹಂದಿ/ದನವನ್ನು ತಿನ್ನದೆಯೋ, ಕತ್ತೆ ನಾಯಿಗಳನ್ನು ಬಿಡಿ, ಇಲ್ಲಿನ ಬಿಳಿ ಹುಡುಗಿಯರನ್ನೂ ಪರಿಗಣಿಸದೇ ಭಾರತೀಯರನ್ನೇ ಮದುವೆಯಾಗುವ ಭಾರತೀಯ ಸಂಸ್ಕೃತಿಯ ಇನ್ನೊಂದು ಬಗೆಯನ್ನು ನೋಡಿ, "ಇಂಡಿಯನ್ಸ್ ಆರ್ ಕ್ರೇಜಿ" ಎನ್ನುತ್ತಾರೆ.

ಈ ಜಾತಿಯ ವಿಷಗಾಳಿ ಅಮೇರಿಕಾದ ಕನ್ನಡ ಸಂಘಗಳಲ್ಲಿ ಎಷ್ಟರಮಟ್ಟಿಗಿದೆಯೋ ಗೊತ್ತಿಲ್ಲ. ನನ್ನ ಹಲವು ಕನ್ನಡ ಸ್ನೇಹಿತರು ಹೇಳುವುದೇನೆಂದರೆ ಅಲ್ಲಿಯೂ ಕೂಡ ಇದು ಸಂಖ್ಯೆಯೇರಿದಂತೆ ನಿಧಾನವಾಗಿ ಕಾಣಿಸುತ್ತಿದೆಯೆಂದು. ಮೊದಲೆಲ್ಲಾ ಇಲ್ಲಿನ ಕನ್ನಡ ಸಂಘಗಳ ಸಭೆಗಳಲ್ಲಿ, ವನಭೋಜನಗಳಲ್ಲಿ ಕೇವಲ ಸಸ್ಯಹಾರೀ ಊಟವಿರುತ್ತಿದ್ದರೆ, ಕೆಲವರು ಪ್ರತಿಭಟಿಸಿ ಭೋಜನಗಳಲ್ಲಿ ಮಾಂಸಹಾರವೂ, ವನಭೋಜನಗಳಲ್ಲಿ ಸುಟ್ಟ ಕೋಳಿಗಳೂ (ಗ್ರಿಲ್ಡ್ ಚಿಕನ್) ಸಿಗುವಂತೆ ಮಾಡಿದ್ದಾರೆಂದೂ, ಸದ್ಯಕ್ಕೆ ಈ ವಿವಾದವನ್ನು ಸಸ್ಯಾಹಾರ-ಮಾಂಸಹಾರದವರೆಗೆ ತಂದಿದ್ದಾರಂತೆ. ಮುಂದೆ ಜಾತಿಗಳಿಗೆ ಬಂದರೂ ಬರಬಹುದೇನೋ?

ಆದರೆ ನಾನು ಗಮನಿಸಿದಂತೆ ಇದಾಗಲೇ ಜಾತಿಗಳ ಮಟ್ಟಕ್ಕೆ ಇಲ್ಲಿನ ಕನ್ನಡ ಅನಿವಾಸಿಗಳಲ್ಲಿ ಅದ್ಯಾವಾಗಲೋ ಬಂದಾಗಿದೆ. ವೀರಶೈವರೆಲ್ಲಾ ಉತ್ತರ ಅಮೇರಿಕಾ ವೀರಶೈವ ಸಂಘವನ್ನು ಎಪ್ಪಂತೆಂಟರಲ್ಲೇ ಸ್ಥಾಪಿಸಿಕೊಂಡಿದ್ದರೆ, ಅಮೇರಿಕಾ ಒಕ್ಕಲಿಗರ ಪರಿಷತ್ ತೊಂಬತ್ತೊಂದರಲ್ಲಿ ಅಸ್ತಿತ್ವಕ್ಕೆ ಬಂದಿದೆ. ಹಾಗೆಯೇ ಹವ್ಯಕರ ಸಂಘ, ಮಾಧ್ವರ ಸಂಘ.................ಇತ್ಯಾದಿ, ಇತ್ಯಾದಿಗಳೂ ಇವೆ.

ಹಿಂದೂ, ಜೈನ, ಬೌದ್ಧರಂತೆಯೇ ವೀರಶೈವ ಕೂಡ ಒಂದು ಧರ್ಮವೆನ್ನುವ ವೀರಶೈವರು ತಮ್ಮ ಉತ್ತರ ಅಮೇರಿಕಾ ವೀರಶೈವ ಸಂಘವನ್ನು ತಮ್ಮ ಧಾರ್ಮಿಕ ಆಚರಣೆ, ಸಂಸ್ಕೃತಿ, ವಚನ ಪಾಠಗಳಿಗೆ ಸೀಮಿತಗೊಳಿಸಿದ್ದರೆ, ಒಕ್ಕಲಿಗ ಪರಿಷತ್ ನೇರವಾಗಿ ’ಅಕ್ಕ’ ರಾಜಕೀಯದಲ್ಲಿ ಹೇಗೆ ತಮ್ಮ ಜನರನ್ನು ಬಲಪಡಿಸಬೇಕೆಂದು ಚರ್ಚಿಸುತ್ತದಂತೆ! ಈ ಸಂಘಗಳ ಸಭೆಗಳಿಗೆ ಹಾಜರಾಗಿದ್ದ ನನ್ನ ಕೆಲವು ಸ್ನೇಹಿತರು ಹೀಗೆ ಅಭಿಪ್ರಾಯಿಸಿದ್ದಾರೆ. ಇನ್ನಿತರೆ ಕನ್ನಡ ಮೂಲದ ಜಾತಿ ಸಂಘಗಳ ಬಗ್ಗೆ ನನಗೆ ಅಷ್ಟಾಗಿ ಪರಿಚಯವಿಲ್ಲ, ಮಿತ್ರರೂ ಇಲ್ಲ. ಹಾಗಾಗಿ ಅವುಗಳ ಬಗೆಗೆ ಏನನ್ನೂ ಹೇಳಲಾರೆ.

ಆದರೂ ನನ್ನೊಬ್ಬ ಓದುಗರು ಅಭಿಪ್ರಾಯಿಸಿದ ಪ್ರಕಾರ ಈ ಅನಿವಾಸೀ ಕನ್ನಡ ಸಂಘಗಳ ನೋಟೀಸ್ ಬೋರ್ಡ್ ಆಗಿರುವ, ಭಟ್ಟ, ಸಿಂಹ, ಜೋಷಿ, ಬೆಳಗೆರೆ, ತ್ರಿವೇಣಿ,ಶ್ರೀನಾಥ, ಶಾಮ, ರಾಮ, ದತ್ತಾತ್ರಿ ಎಂಬ ಹೆಸರುಗಳ ಬ್ರ್‍ಆಹ್ಮಣ ಅಂಕಣಕಾರರೇ ಇರುವ "ಅದಪ್ಪಾ ಕನ್ನಡ" ಎಂಬ ಕನ್ನಡ ಪೋರ್ಟಲ್, ಅನಿವಾಸಿಯರಲ್ಲಿ ಜಾತಿ ಅಜೆಂಡಾವನ್ನು ಬಿತ್ತುತ್ತಿದೆಯಂತೆ. ಇತ್ತೀಚೆಗೆ ಅನೇಕ ಮಹಿಳಾ ಓದುಗರು "ಅದಪ್ಪಾ ಕನ್ನಡ"ವನ್ನು, ಅದರಲ್ಲಿ ಹಾಕಿರುವ ಹಸಿ ಹೆಣ್ಣುಗಳ ಫೋಟೋಗಳ ದೆಸೆಯಿಂದಲೋ, ಬಿಸಿಯೇರಿಸುವ ಬ್ಯಾನರ್ ಗಳಿಂದಲೋ "ಪೋರ್ನೋ ಸೈಟ್" ಎಂದು ಪರಿಗಣಿಸಿ, ನಾನು ಬರೆಯುವ "ಅವರ್ ಕರ್ನಾಟಕ.ಕಾಮ್"ಗೆ ಸಾರಾಸಗಟಾಗಿ ವಲಸೆ ಬಂದಿದ್ದಾರೆ! ಹೀಗಂತ ಹಲವಾರು ಮಹಿಳಾ ಓದುಗರು ಇಮೈಲ್ ಕಳುಹಿಸಿ, "ಕನ್ನಡ, ಕನ್ನಡ ಎನ್ನುವ ’ಮಡಿವಂತ (ಬ್ರಾ)ಹ್ಮಣರ’ ಈ ಕನ್ನಡ ಪೋರ್ಟಲ್ ನಲ್ಲಿ ’ಬ್ರಾ’ ಇಲ್ಲದ ಹೆಣ್ಣುಗಳನ್ನು ತೋರುವ" ಬಗ್ಗೆ ಬರೆಯಿರೆಂದಿದ್ದರು. ಹಾಗಾಗಿ ಈ ವಿಷಯವನ್ನು ಸಂದರ್ಭಕ್ಕನುಗುಣವಾಗಿ ಇಲ್ಲಿ ಉಲ್ಲೇಖಿಸಿದ್ದೇನೆ.

ಇರಲಿ, ಚಿತ್ರದುರ್ಗದ ಶ್ರೀಗಳು ಭಾರತದಲ್ಲಿ ಜಾತಿ, ಕುಲ, ಗೋತ್ರಗಳಿಗೊಂದರಂತೆ "ಪೀಠ"ಗಳನ್ನು ಸ್ಥಾಪಿಸಿಕೊಡುವುದರ ಜೊತೆಗೆ, ಅಮೇರಿಕಾದಲ್ಲಿ ಕೂಡ "ಜಾತಿ ಪೀಠ"ಗಳನ್ನು ಸ್ಥಾಪಿಸಿಕೊಡುವತ್ತ ಯಾವಾಗ ಮುಖ ಮಾಡುವರೋ? ಈ ಹಿಂದೆ ಜಾತಿಪೀಠಗಳ ಕುರಿತು ನಾನು ಬರೆದ ಲೇಖನಕ್ಕೆ ಉತ್ತರವಾಗಿ ಹಲವರು ಆಗಲೇ ಇಲ್ಲಿನ ಪೀಠಗಳ ಪೀಠಾಧಿಪತಿಗಳಾಗಲು ಅರ್ಜಿಯನ್ನು ಕಳುಹಿಸಿದ್ದರು. ಒಬ್ಬ ಮಹಿಳಾ ಓದುಗರಂತೂ "ಅಕ್ಕ ಶಕ್ತಿ ಪೀಠ" ಎಂದು ತಮ್ಮ ಪೀಠದ ಹೆಸರನ್ನೂ ಸೂಚಿಸಿದ್ದಾರೆ! ದುರ್ಗದ ಶ್ರೀಗಳು ಈ ಅರ್ಜಿಗಳು ಬೇಕಿದ್ದರೆ ನನ್ನನ್ನು ಸಂಪರ್ಕಿಸಬಹುದು.

ಬಹಳ ಮಂದಿ ಅನಿವಾಸೀ ಭಾರತೀಯರು, ಸದಾ ನೀರಿನಿಂದ ಹೊರಗಿದ್ದಂತೆ ಚಡಪಡಿಸುತ್ತಾ "ಭಾರತದಲ್ಲಾಗಿದ್ದರೇ ಹಾಗಿರಬಹುದಿತ್ತು, ಹೀಗಿರಬಹುದಿತ್ತು..." ಎಂದೆಲ್ಲ ಬಡಬಡಿಸುತ್ತಾ ಭಾರತವನ್ನು ನೆನೆಯುವ, "ಇನ್ನು ಮೂರೇ ವರ್ಷ, ವಾಪಸ್ ಹೋಗಿಬಿಡುತ್ತೇವೆ" ಎಂದು ನಿತ್ಯವೂ ಕಂಡವರಲ್ಲಿ ಹೇಳಿಕೊಳ್ಳುವ ಇವರು ಯಾವತ್ತೂ ಭಾರತಕ್ಕೆ ಮರಳರು! ಈ ಬಡಬಡಿಕೆ, ಬುಡುಬುಡಿಕೆ ಎಲ್ಲಾ ಹೀಗೆ ಸುಮ್ಮನೇ ಒಂದು ಕಾಲಕ್ಷೇಪ, ಗೊಣಗಾಟ, ನರಳಾಟ. ಇಲ್ಲಿನ ಗ್ರಾಹಕ ಸ್ವಾತಂತ್ರ್ಯವನ್ನು ಶೋಷಿಸುತ್ತ, ಗಂಟುಮುಖವಿಟ್ಟು ಸೂಪರ್ ಮಾರ್ಕೆಟ್ ನ ಸಹಾಯಕರುಗಳನ್ನು ತಲೆಹರಟೆ ಪ್ರಶ್ನಿಸುತ್ತ, ಇವರ ತಲೆಹರಟೆ ಪ್ರಶ್ನೆಗಳಿಗೆ, ಆ ಸಹಾಯಕರೇನಾದರೂ ಕೊಂಚ ಅಸಡ್ಡೆ ತೋರಿದರೋ ಅಷ್ಟೇ. ಅವರನ್ನು "ವರ್ಣದ್ವೇಷಿ"ಗಳೆಂದು ಅವರುಗಳ ಮೇಲ್ವಿಚಾರಕರಿಗೆ ದೂರು ಕೊಟ್ಟು ಗೋಳು ಹುಯ್ದುಕೊಳ್ಳುತ್ತದೆ, ಈ ವರ್ಗ. ಇನ್ನು ಈ ವರ್ಗ ಭಾರತಕ್ಕೆ ಮರಳಿ, ಭಾರತದ "ಬೇಕಾದ್ರೆ ತಗಾ ಇಲ್ಲ ಅಂದ್ರೆ ತಿಗಾ ಮುಚ್ಕೊಂಡು ನಡೀತಿರು" ಎನ್ನುವ ತಾಳ್ಮೆಗೆಟ್ಟ ವ್ಯಾಪಾರಿಗಳನ್ನು ಎದುರಿಸುವುದೇ? ಈ ವರ್ಗದ ಜನಗಳು ಮಾಡುವ "ಅಮೇರಿಕಾ ಗ್ರಾಹಕ ಸ್ವಾತಂತ್ರ್ಯದ ಶೋಷಣೆ"ಯ ಬಗ್ಗೆ ಟಿ.ಎನ್. ಸೀತಾರಾಂ ರವರ ಧಾರಾವಾಹಿಗಳ ರೀತಿಯಲ್ಲಿ ಮೆಗಾಸೀರಿಯಲ್ಲುಗಳನ್ನೇ ತೆಗೆಯಬಹುದು! "ಮುಕ್ತ ಮಾಯಾಮೃಗವಾದ ಅಮೇರಿಕಾದಲ್ಲಿ ಮನ್ವಂತರಗೊಂಡವರೊಂದಿಗೆ ಮುಖಾಮುಖಿ" ಎಂದು!

ಅಮೇರಿಕಾದಲ್ಲಿದ್ದಾಗ ಇಡ್ಲಿ, ದೋಸೆ, ಭಾರತೀಯ ತಿನಿಸು ಬಿಟ್ಟರೆ ಮತ್ತಿನ್ನೊಂದನ್ನು ಮೂಸದ, ಭಾರತಕ್ಕೆ ರಜೆಗೆ ಹೋದಾಗ ಪಿಜ್ಜಾ, ಬರ್ಗರ್, ಪಾಸ್ತಾ ಎಂದೆಲ್ಲಾ ತಮ್ಮ ಸಂಬಂಧಿಗಳನ್ನು ಗೋಳು ಹುಯ್ದುಕೊಳ್ಳುವ; ಅಮೇರಿಕಾದ ಸುಡು ಬೇಸಿಗೆಯಲ್ಲಿ ದುಪ್ಪಟ್ಟಾಗಳನ್ನು ಚಳಿ ಬಂದವರಂತೇ ಹೊದ್ದು ಭಾರತೀಯ ಸಂಸ್ಕೃತಿಯ ರಾಯಭಾರಿಗಳಂತೆ ತಿರುಗುತ್ತಾ, ಬೆಂಗಳೂರಿಗೆ ಬಂದೊಡನೆ ಅಮೇರಿಕಾದ ರಾಯಭಾರಿಗಳಾಗುವ ಈ ಕನ್ಫೂಸ್ಡ್ ವರ್ಗದ ಬಗ್ಗೆ ಸರಮಾಲೆಗಳನ್ನೇ ಬರೆಯಬಹುದು. ಅನೇಕರು ಭಾರತದಿಂದಲೇ ಲೋಡುಗಟ್ಟಲೆ ಬಟ್ಟೆಗಳನ್ನು ತಂದಿರುತ್ತಾರೇನೋ! ಏಕೆಂದರೆ ಅವರುಗಳು ಹಾಕುವ ಭಾರತದ ಪ್ಯಾಂಟು, ಶರ್ಟುಗಳು ಇಲ್ಲಿ ಅಭಾಸವಾಗಿ ಕಾಣುತ್ತಿರುತ್ತವೆ. ಅದರ ಪರಿವೆಯೂ ಅವರಿಗಿರುವುದಿಲ್ಲ! "ವೆನ್ ಯು ಆರ್ ಇನ್ ರೋಮ್, ಬಿ ಲೈಕ್ ರೋಮನ್" ಎಂಬ ನಾಣ್ಣುಡಿಯನ್ನು ಇವರನ್ನು ನೋಡಿಯೇ ಸೃಷ್ಟಿಸಿದರೆಂದೆನಿಸುತ್ತದೆ!

ಇರಲಿ, ಸಾಮಾನ್ಯವಾಗಿ ಉನ್ನತ ಶಿಕ್ಷಣವನ್ನು ಪಡೆದು, ಉತ್ತಮ ಬುದ್ದಿಮತ್ತೆಯನ್ನು ಹೊಂದಿ, ಅಮೇರಿಕಾ ಸೇರಿ, ಇಲ್ಲಿನ ಪ್ರಜೆಗಳಾದರೂ ತಮ್ಮ ಸುಪ್ತ ಜಾತೀಯತೆಯನ್ನು ತೊರೆಯಲಾಗದಷ್ಟು ಜಾತಿಗಳು ನಮ್ಮನ್ನು ಆವರಿಸಿಕೊಂಡಿವೆ. ಭಾರತದಲ್ಲಿಯೂ ಕೂಡ ವಿದ್ಯಾವಂತರಾದಷ್ಟು ಜಾತಿಜಾಗೃತರಾಗುತ್ತಾರೆಯೇ ಹೊರತು ಜಾತಿಪರಿಧಿಯ ಹೊರಕ್ಕೆ ಬರುವವರು ಕಡಿಮೆಯೇ! ಇದು ಸ್ವತಂತ್ರ್ಯ ಭಾರತದ ಸಾಮಾಜಿಕತೆಯ ವಿಕಾಸವೋ ವಿಕಾರವೋ, ಅಥವಾ ಭಾರತ ಸ್ವಾತಂತ್ರ್ಯಾ ನಂತರದ ಶಿಕ್ಷಣ ಕ್ರಾಂತಿಯ ಪರಿಣಾಮವೋ ಅರಿಯೇ! ಒಟ್ಟಾರೆ ಭಾರತ ಎತ್ತಲೋ ಪ್ರಗತಿಸುತ್ತಿದೆ.

ಸಂದರ್ಭಕ್ಕನುಗುಣವಾಗಿ ಬಸವಣ್ಣನ ವಚನವೊಂದು ನೆನಪಾಗುತ್ತಿದೆ, ’ಹಲವು ಕಾಲ ಹಂಸೆಯ ಸಂಗದಲ್ಲಿದ್ದರೇನು, ಬಕ ಶುಚಿಯಾಗಬಲ್ಲುದೇ? ಗಂಗಾನದಿಯಲ್ಲಿದ್ದರೇನು, ಪಾಷಾಣ ಮೃದುವಾಗಬಲ್ಲುದೇ? ಕಲ್ಪತರುವಿನ ಸನ್ನಿಧಿಯಲ್ಲಿದ್ದರೇನು, ಒಣ ಕೊರ್‍ಅಡು ಕೊನರಿ ಫಲವಾಗಬಲ್ಲುದೇ? ಕಾಶೀಕ್ಷೇತ್ರದಲ್ಲಿ ಒಂದು ಶುನಕವಿದ್ದರೇನು, ಅದರ ಹಾಲು ಪಂಚಾಮೃತಕ್ಕೆ ಸಲುವುದೇ? ತೀರ್ಥದಲೊಂದು ಗಾರ್ದಭನಿದ್ದರೇನು, ಕಾರಣಿಕನಾಗಬಲ್ಲುದೇ? ಖಂಡುಗ ಹಾಲೊಳಗೊಂದು ಇದ್ದಲಿಯಿದ್ದರೇನು, ಬಿಳುಹಾಗಬಲ್ಲುದೇ? ಇದ ಕಾರಣ ಕೂಡಲಸಂಗನ ಶರಣರ ಸನ್ನಿಧಿಯಲ್ಲಿ ಅಸಜ್ಜನನಿದ್ದರೇನು, ಸದ್ಭಕ್ತನಾಗಬಲ್ಲನೇ?’ ಅಮೇರಿಕಾದಲ್ಲಿದ್ದರೇನು ಭಾರತದಲ್ಲಿದ್ದರೇನು, ವಿದ್ಯೆಯಿದ್ದರೇನು ಅವಿದ್ಯೆಯಾದರೇನು, ಭಾರತೀಯ ಜಾತಿಮುಕ್ತನಾಗಬಲ್ಲನೇ?

ಅಣಕ:

ನೂತನ ಬಿಜೆಪಿ ಶಾಸಕರು ದೇವರುಗಳು, ರೆಡ್ಡಿ, ಎಡ್ಯೂರಪ್ಪ, ಚಿಗಪ್ಪ, ದೊಡ್ಡಪ್ಪಗಳ ಹೆಸರಿನಲ್ಲೆಲ್ಲಾ ಪ್ರಮಾಣ ವಚನ ಸ್ವೀಕರಿಸಿದ್ದನ್ನು ಕೇಳಿದ್ದೀರಷ್ಟೇ.

ರಾಜ್ಯದ ಜನತೆಯೆಲ್ಲಾ ರೇಣುಕಾಚಾರ್ಯರು "ಜಯಲಕ್ಷ್ಮಿ" ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುವರೆಂದು ಕಾತುರದಿಂದ ಎದುರು ನೋಡುತ್ತಿದ್ದರೆ, ಠುಸ್ಸೆನ್ನುವಂತೆ ’ಎಡ್ಯೂರಪ್ಪ’ ಹೆಸರಿನಲ್ಲಿ ಪ್ರಮಾಣ ಮಾಡಿದ್ದೇಕೋ?

ಬಹುಶಃ ಅಂತರಂಗದಲ್ಲಿ ’ಆಹ್, ಜೈಲಕ್ಷ್ಮಿ, ಆಹ್ ಜೈಲಕ್ಷ್ಮಿ’ ಎಂಬ ಅಸ್ಖಲಿತ ಪದಗಳ ಸ್ಖಲನಲೋಕದಲ್ಲಿ ವಿಹರಿಸುತ್ತಿದ್ದರೇನೋ!

Coming Next Week: An article on second generation Indian Americans.

5 comments:

ವಿ.ರಾ.ಹೆ. said...

ನಮಸ್ತೆ,

ನಿಮ್ಮ ಮೊದಲಿನ ಕೆಲವು ಪ್ಯಾರಾಗಳನ್ನು ಓದುತ್ತಿದ್ದಂತೆ ನೀವು ಈ ರೀತಿ ಜಾತಿಗಳ ಹೆಸರಲ್ಲಿ ಗುಂಪುಗಾರಿಕೆ ಮಾಡುವುದರ, ಎಲ್ಲದಕ್ಕೂ ಜಾತಿ ಬಣ್ಣ ಹಚ್ಚುವದರ ವಿರೋಧಿ ಎಂದುಕೊಂಡೆ. ಕೊನೆಗೆ ನೋಡಿದರೆ ದಟ್ಸ ಕನ್ನಡ ಬ್ರಾಹ್ಮಣರ ಪೋರ್ಟಲ್ ಎಂದು ಕೆಲ ಲೇಖಕರ ಹೆಸರ್ಹಿಡಿದು ಅದೇ ವರಸೆಯಲ್ಲಿ ನಿಮ್ಮ ಅಪ್ಪಟ ಭಾರತೀಯ ಬುದ್ಧಿಯನ್ನು ತೋರಿಸಿಬಿಟ್ಟಿರಿ. so..ನೀವು ಉಲ್ಲೇಖಿಸಿದ ಕಮ್ಮ, ಕಾಪುಗಳ , ಬಿಹಾರಿಗಳ ಮನಸ್ಥಿತಿಗೂ ಇದಕ್ಕೂ ವ್ಯತ್ಯಾಸ ಕಾಣುತ್ತಿಲ್ಲವಲ್ಲ!

Anonymous said...

ರವಿ ಅವರೆ, ನಿಮ್ಮ ಕೆಲವು ಲೇಖನಗಳ ಬಗ್ಗೆ ನನಗೆ ಆಕ್ಷೇಪಣೆಗಳಿದ್ದರೂ ಅದರಲ್ಲಿರುವ ಕೆಲವು ಸತ್ಯ ಸಂಗತಿಗಳನ್ನು ನಿರಾಕರಿಸಲು ಸಾಧ್ಯವಿಲ್ಲ.

ಅಮೇರಿಕಾದಲ್ಲಿ ಜಾತ್ಯಾತೀತತೆ ಅನ್ನೋದು ಒಂದು ಹುಸಿಕನಸು. ನಾನೂ ಸಹಾ ಲಾಸ್ ಏಂಜಲೀಸ್ ನಲ್ಲಿ ಕೆಲವು ವರ್ಷ ಇದ್ದು ಬಂದವನು. ಕನ್ನಡಕೂಟಗಳ ಸಭೆಗಳಲ್ಲಿ ಭಾಗವಹಿಸಿದವನು. ಕೂಟದ ಸದಸ್ಯರುಗಳಲ್ಲಿ ಜಾತಿಯ ಮನೋಭಾವ ಕಾಣದಿದ್ದರೂ ಅಧಿಕಾರಿಗಳಲ್ಲಿ ಅದು ಸ್ಪಷ್ಟವಾಗಿ ಕಾಣುತ್ತದೆ. (ಒಂದು ಸಭೆಯಲ್ಲಂತೂ ಕೆಲವರು ಕೈ ಕೈ ಮಿಲಾಯಿಸುವ ಮಟ್ತಕ್ಕೆ ಹೋಗಿತ್ತು)ಅಂತಹವರಲ್ಲಿ ಒಬ್ಬರು ಅಮೆರಿಕಾದಲ್ಲಿ ಜಾತಿಯ ಹೆಸರಲ್ಲಿ ಕಿಚ್ಚು ಹಚ್ಚಿದವರು ಅಂತ ಅನೇಕರಿಗೆ ಗೊತ್ತು.

http://ellakavi.wordpress.com/

‘ಕುವೆಂಪು’ ಹೆಸರಲ್ಲಿ ತಯಾರಿಸಿದ ಸಾಫ್ಟ್‌ವೇರ್‍ ಆನ್ನು ಜನಪ್ರಿಯ ಗೊಳಿಸುವ ಸಲುವಾಗಿ ಉಳಿದ ‘ಬ್ರಾಹ್ಮಣ’ ಸಾಫ್ಟ್‌ವೇರ್ ಗಳ ಮೇಲೆ ಕೆಸರು ಎರಚುತ್ತಾ ವೈಯುಕ್ತಿಕ ದ್ವೇಷ ಕಾರುತ್ತಿರುವ ಜನರು ಎಲ್ಲಿ ಇರುತ್ತಾರೋ ಅಲ್ಲಿ ಜಾತ್ಯಾತೀತತೆ ಹೇಗೆ ಸಾಧ್ಯ ಹೇಳಿ.

-ರವಿ ಹೆಗಡೆ, ಬೆಂಗಳೂರು

poochanthe said...

ekavi letter to KDA Chairman Sri. Mukhyamantri Chandru
http://ellakavi.wordpress.com/2008/06/14/ekavi-letter-to-kda-chairman-sri-mukhyamantri-chandru/

Supreeth.K.S said...

ರವಿ ಸರ್,

>>>ಅಮೇರಿಕಾದಲ್ಲಿದ್ದಾಗ ಇಡ್ಲಿ, ದೋಸೆ, ಭಾರತೀಯ ತಿನಿಸು ಬಿಟ್ಟರೆ ಮತ್ತಿನ್ನೊಂದನ್ನು ಮೂಸದ, ಭಾರತಕ್ಕೆ ರಜೆಗೆ ಹೋದಾಗ ಪಿಜ್ಜಾ, ಬರ್ಗರ್, ಪಾಸ್ತಾ ಎಂದೆಲ್ಲಾ ತಮ್ಮ ಸಂಬಂಧಿಗಳನ್ನು ಗೋಳು ಹುಯ್ದುಕೊಳ್ಳುವ; ಅಮೇರಿಕಾದ ಸುಡು ಬೇಸಿಗೆಯಲ್ಲಿ ದುಪ್ಪಟ್ಟಾಗಳನ್ನು ಚಳಿ ಬಂದವರಂತೇ ಹೊದ್ದು ಭಾರತೀಯ ಸಂಸ್ಕೃತಿಯ ರಾಯಭಾರಿಗಳಂತೆ ತಿರುಗುತ್ತಾ, ಬೆಂಗಳೂರಿಗೆ ಬಂದೊಡನೆ ಅಮೇರಿಕಾದ ರಾಯಭಾರಿಗಳಾಗುವ ಈ ಕನ್ಫೂಸ್ಡ್ ವರ್ಗದ >>>
ನನಗೆ ನಗು ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಮೇರಿಕನ್ನಡಿಗರು ಎಂಬ ಪ್ರಕ್ರಿಯೆಯನ್ನು ಸಮೂಹ ಸನ್ನಿಯಂತೆ ಕಂಡು ಹುಸಿ ಸಂಭ್ರಮದಲ್ಲಿ ಕಾಲ ಕಳೆಯುವ ಭಾರತದ ಭಾರತೀಯರಿಗೆ ಈ ವಾಸ್ತವಗಳು ತಿಳಿಯಬೇಕು.
ಜಾತೀಯತೆ ಎಂಬುದು ಬಹುಶಃ ಸುಲಭಕ್ಕೆ ತಣಿಯುವ ಸಂಗತಿಯಲ್ಲ. ಅದು ನಮ್ಮ ಐಡೆಂಟಿಟಿಯನ್ನಾಗಿ ಸಮಾಜ ಟ್ರೀಟ್ ಮಾಡುತ್ತಿರುವಾಗ ಜಾತ್ಯಾತೀತತೆ ಎಂಬುದು ಕ್ರೂರ ಅಣಕವಾಗಿ ಕಾಣುತ್ತದೆ. ಇಷ್ಟು ಶತಮಾನಗಳನ್ನು ಜಾತಿಗಳ ನಡುವೆ ಮಣ್ಣು ಅಗೆಯುವುದರಲ್ಲಿ ಕಳೆದ ನಮಗೆ ದಿಡೀರೆಂದು ಆ ಗುಂಡಿಗಳನ್ನು ಮುಚ್ಚಲು ಸಾಧ್ಯವಾಗುತ್ತಿಲ್ಲ. ಎಲ್ಲೋ ಕೆಲವೆಡೆ ಕೆಲವರು ಈ ದ್ವೀಪಗಳ ನಡುವೆ ಸೇತುವೆ ಸ್ಥಾಪಿಸಬಹುದಾದರೂ ಆ ಸೇತುವೆಯೂ ಸಹ ಆ ಎರಡು ದ್ವೀಪಗಳ ಪ್ರತ್ಯೇಕತೆಯನ್ನು ಸಾರಿ ಸಾರಿ ಹೇಳುತ್ತದೆ. ಬಹುಶಃ ನಾವು ಇನ್ನಷ್ಟು ಸಮಯ ಕೊಡಬೇಕು ಅನ್ನಿಸುತ್ತದೆ.

ಸುಪ್ರೀತ್

Anonymous said...

I have read all ur article with in 3 hrs..superb..
Ur writing is so OBECTIVE..
U r not pleasing any one here..dats d beauty of ur writing..
Pls keep writing more articles..