ಬೆಂಗಳೂರ ಬಾಂಬು ಮತ್ತು ಭಾರತೀಯ ಸೆಕ್ಯುಲರಿಸಮ್ಮೂ!

ಅಂತೂ ಕೊನೆಗೆ ಬೆಂಗಳೂರಿನಲ್ಲಿಯೂ ಬಾಂಬುಗಳು ಸಿಡಿದಿವೆ. ಇದು ಅಸಲೀ ಭಯೋತ್ಪಾದಕರ ಬಾಂಬುಗಳೋ, ಅಥವಾ ರಿಯಲ್ ಎಸ್ಟೇಟಿಗರು ’ಮಾಮೂಲಿ’ ಕೊಡಲಿಲ್ಲವೆಂದು ರೌಡಿ ಪಡೆಗಳು ಬಾಂಬಿಸಿದರೋ ಅಥವಾ ಬಿಜೆಪಿಗಳು ಹೇಳಿಕೊಳ್ಳುವಂತೆ ಅವರ ವಿರೋಧಿಗಳು ಸಿಡಿಸಿದರೋ ಎಂಬ ಜಿಜ್ಞಾಸೆಗಳು ಜನರಲ್ಲಿ ಮೂಡಿವೆಯೋ ಅಥವಾ ಮೂಡಿಸಿದ್ದಾರೋ! ಒಟ್ಟಾರೆ ಬೆಂಗಳೂರಿನಲ್ಲಿ ಬಾಂಬುಗಳು ಸಿಡಿದಿವೆ. ನನ್ನ ಬರಹಗಳನ್ನು ಓದಿ, ಆಗಾಗ್ಗೆ ಪ್ರತಿಕ್ರಿಯಿಸುವ ಓದುಗ ಮಿತ್ರ ನಂದಕುಮಾರ್, ಈ ವಿಷಯವಾಗಿ ಈವಾರ ಬರೆಯಿರೆಂದು ಸಲಹೆ ಕೂಡಾ ಕೊಟ್ಟಿದ್ದರು.

ಹೀಗೊಮ್ಮೆ ಯೋಚಿಸಿ ನೋಡಿ, ಈ ಭಯೋತ್ಪಾದನೆಗೆ (ವಿಶ್ವದ್ದಲ್ಲ, ಭಾರತದ ಭಯೋತ್ಪಾದನೆ) ಮೂಲ ಕಾರಣಗಳೇನು ಎಂದು!

ಯಾವುದೇ ದೇಶದ ಜನನಾಯಕರು ದೂರದೃಷ್ಟಿಯಿಲ್ಲದೇ ಹೋರಾಟ/ಕ್ರಾಂತಿಗಳನ್ನು ಭಾವುಕರಾಗಿ ಕ್ರಾಂತಿಸಿದರೆ ಆ ದೇಶದಲ್ಲಿ ಏನಾಗಬಹುದು ಎಂಬುದಕ್ಕೆ ನಮ್ಮ ಭಾರತ ಒಂದು ಉತ್ತಮ ಉದಾಹರ್‍ಅಣೆ. ನಾನು ಆಗಷ್ಟೇ ’ಕಾರ್ಪೋರೇಟ್’ ಪ್ರಪಂಚಕ್ಕೆ ಸೇರಿದ್ದೆ. ಆಗ ನನ್ನ ಬಾಸ್ ನನಗೆ ’ನೀನು ಯಾವತ್ತೂ ವ್ಯವಹಾರದಲ್ಲಿ, ಉದ್ಯೋಗದಲ್ಲಿ ಹೃದಯವನ್ನು ಇಡಬೇಡ. ಕಂಪೆನಿ ಸಂಬಳ ಕೊಡುವುದು ನಿನ್ನ ತಲೆಗೆ ಮಾತ್ರ. ಹಾಗಾಗಿ ನಿನ್ನ ಕೆಲಸದಲ್ಲಿ ಯಾವುದೇ ಭಾವನೆಗಳಿಗೂ ಅವಕಾಶ ಕೊಡದೆ ನಿಷ್ಟುರವಾಗಿ ಕೆಲಸದ/ಕಂಪೆನಿಯ ಒಳಿತಿಗೆ ನಿನ್ನ ತಲೆಯನ್ನು ಮಾತ್ರ ಉಪಯೋಗಿಸು. ನಿನ್ನ ಹೃದಯವನ್ನು ನಿನ್ನ ಕುಟುಂಬಕ್ಕೂ, ಕತೆ/ಕವನಗಳಿಗೂ ಉಪಯೋಗಿಸು’ ಎಂದು ಉಪದೇಶಿಸಿದ್ದ. ಅದು ನಮ್ಮ ರಾಷ್ಟ್ರ್‍ಅ ನಾಯಕರುಗಳಿಗೂ ಎಷ್ಟೊಂದು ಚೆನ್ನಾಗಿ ಅನ್ವಯವಾಗುತ್ತದಲ್ಲವೇ ಎಂದೆನಿಸುತ್ತದೆ. ಎಲ್ಲಿ ನಿಷ್ಟುರ, ಧೃಢನಿರ್ಧಾರಗಳನ್ನು ತೆಗೆದುಕೊಳ್ಳಬೇಕಿತ್ತೋ ಅಲ್ಲಿ ಹೃದಯವನ್ನಿಟ್ಟು ದೇಶಕ್ಕೆ ಎಷ್ಟೋ ಹಾನಿ ಮಾಡಿದ್ದಾರೆನಿಸುತ್ತದೆ!

ಇರಲಿ, ಈ ಭಯೋತ್ಪಾದನೆಯ ಮೂಲ ಪಾಕಿಸ್ತಾನವೆ? ಒಸಾಮಾ ನೆ? ಮುಸ್ಲಿಮರೇ? ಖಂಡಿತವಾಗಿಯೂ ಅಲ್ಲ. ಇದರ ಮೂಲ ಕಾರಣ ಇಂದಿನ ಮನಮೋಹನ್ ಸಿಂಗ್ ರಿಂದ ಹಿಡಿದು ಅಂದಿನ ಮೋಹನ್ ಗಾಂಧಿವರೆಗೆ ಭಾರತದ ಭೂತ/ವರ್ತಮಾನದ ಜನನಾಯಕರುಗಳು. ಎಲ್ಲಿ ಜನನಾಯಕರುಗಳು ದೂರದೃಷ್ಟಿಯಿಲ್ಲದೇ ಹೋರಾಟಗಳನ್ನೂ, ಕ್ರಾಂತಿಗಳನ್ನು ಕೇವಲ ಭಾವನೆಗಳ ಬಂಡವಾಳದ ಮೇಲೆ ನಿರೂಪಿಸುತ್ತಾರೋ, ಆ ರಾಷ್ಟ್ರಗಳು ಎಲ್ಲಾ ತರಹದ ದುರ್ಬಲತೆಗಳಿಗೆ ತೆರೆದುಕೊಂಡಿರುತ್ತದೆ ಎಂದೆನಿಸುತ್ತದೆ. ಇದು ಭಾರತವಾಗಬಹುದು, ಪಾಕಿಸ್ತಾನವಾಗಬಹುದು, ಬಾಂಗ್ಲಾ ಆಗಬಹುದು, ರಷ್ಯಾ, ಅಮೇರಿಕಾ, ಕೊರಿಯಾ, ಅಫ್ಘಾನಿಸ್ತಾನ...ಯಾವುದಾದರೂ ದೇಶವಾಗಬಹುದು.

ಅಂದು ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಕೇವಲ ಸ್ವಾತಂತ್ರ್ಯ ಪಡೆಯುವುದೊಂದೇ ಉದ್ದೇಶವನ್ನು ಹೊಂದಿ, ಸ್ವಾತಂತ್ರ್ಯ ಚಳುವಳಿಯನ್ನು ರೂಪಿಸಿದರೇ ಹೊರತು, ಸ್ವಾತಂತ್ರ್ಯಾನಂತರದ ಭಾರತವನ್ನು ಅವರು ಯೋಚಿಸಲೇ ಇಲ್ಲ. ಅವರಲ್ಲಿ ವಿದೇಶೀ ಗುಲಾಮಗಿರಿಯಿಂದ ಹೊರಬರಬೇಕೆಂಬ ತುಡಿತವಿತ್ತೇ ವಿನಹ ಮುಂದೇನು? ಎಂಬ ದೂರದೃಷ್ಟಿತ್ವವಿರಲಿಲ್ಲ. ’ಸ್ವಾತಂತ್ರ್ಯ ಸಿಕ್ಕಲಿ, ಆಮೇಲೆ ನೋಡಿಕೊಳ್ಳೋಣ. ಬ್ರಿಟಿಷರಿಗಿಂತ ನಾವು ಉತ್ತಮವಲ್ಲವೇ!’ ಎಂಬ ಸ್ವಪ್ರತಿಷ್ಟೆ ಕಾರಣವಾಗಿತ್ತೋ ಅಥವಾ ಆತ್ಮವಿಶ್ವಾಸ ತುಳುಕುತ್ತಿತ್ತೋ ನಾನರಿಯೇ. ಒಟ್ಟಾರೆ ಭರಪೂರ ಭಾವನೆಗಳ ಪ್ರವಾಹವಂತೂ ಅದಾಗಿತ್ತು.

ಸರಿ, ಆ ಹೋರಾಟದ ಫ಼ಲವಾಗಿ ಸ್ವಾತಂತ್ರ್ಯ ಪಡೆಯಲು ಧರ್ಮದ ಮೇಲೆ ದೇಶವನ್ನು ವಿಭಜಿಸುವ ಒಪ್ಪಂದವನ್ನು ಒಪ್ಪಿ, ಆ ಒಪ್ಪಂದವನ್ನು ಧೃಢವಾಗಿ, ನಿಷ್ಟುರವಾಗಿ ಅನುಷ್ಟಾನಗೊಳಿಸದೆ ಮತ್ತೆ ಭಾವನೆಗಳ ಪ್ರವಾಹವನ್ನು ತೆರೆದು "ಭಾರತದಲ್ಲಿನ ಭಯೋತ್ಪಾದನೆ"ಗೆ ಬೀಜ ನೆಟ್ಟಿದ್ದು ಇನ್ನೊಂದು ತಪ್ಪು. ಆ ತಪ್ಪನ್ನು ಮರೆಮಾಚಲು ಮತ್ತೆ ಭಾವುಕರಾಗಿ ಭಾರತ ಸೆಕ್ಯುಲರ್ ದೇಶ, ನಮ್ಮದು ಧರ್ಮಾಧರಿತ ರಾಷ್ಟ್ರವಲ್ಲ ಎಂದದ್ದು ಅತ್ಯುತ್ತಮವಾದ, ಉನ್ನತವಾದ ಉದ್ದೇಶವೇ ಆದರೂ ಅದರ ಅನುಷ್ಟಾನ ಹೇಗಾಯಿತು ಎಂಬುದನ್ನು ಕೊಂಚ ನಾವುಗಳು ಅವಲೋಕಿಸಬೇಕು.

ನಂತರದ ಸ್ವತಂತ್ರ ಸೆಕ್ಯುಲರ್ ಭಾರತದಲ್ಲಿ ಸಾಕಷ್ಟು ಕಾನೂನುಗಳು ಧರ್ಮಾಧರಿತವಾಗಿ ರೂಪುಗೊಂಡವು. ಉದಾ: ಹಿಂದೂ ಮ್ಯಾರೇಜ್ ಆಕ್ಟ್, ಮುಸ್ಲಿಂ ಮ್ಯಾರೇಜ್ ಆಕ್ಟ್, ಕ್ರಿಶ್ಚಿಯನ್ ಮ್ಯಾರೇಜ್ ಆಕ್ಟ್...ಇತ್ಯಾದಿ. ಪ್ರಪಂಚದ ಇನ್ಯಾವುದೇ ಸೆಕ್ಯುಲರ್ ದೇಶದಲ್ಲಿ ಧರ್ಮಾಧರಿತವಾದ ಕಾನೂನುಗಳಿಲ್ಲ! ಧರ್ಮಾಧರಿತವಾದ ಕಾನೂನುಗಳಿರುವ ದೇಶಗಳು "ಸೆಕ್ಯುಲರ್" ಅಲ್ಲವೆಂಬುದು ನಮಗೆ ಎಂದು ಅರಿವಾಗುವುದೋ!

ಸೆಕ್ಯುಲರ್ ಪದದ ಅರ್ಥವನ್ನು ಭಾರತ ’ಓಲೈಕೆ’ಗೆ ಅರ್ಥೈಸಿರುವುದು ಇಂದು ನೆನ್ನೆಯಲ್ಲ, ತನ್ನ ಸ್ವಾತಂತ್ರ್ಯ ಸಿಕ್ಕ ಘಳಿಗೆಯಲ್ಲೇ ಹಾಗೆ ವ್ಯಾಖ್ಯಾನಿಸಿದೆ. ಆ ಸೆಕ್ಯುಲರಿಸಂ, ಭಾರತದ ಮುಂದಿನ ಪೀಳಿಗೆಯ ಜನನಾಯಕರುಗಳ ಪೋಷಣೆಯಲ್ಲಿ ಹೆಮ್ಮರವಾಗಿ ಬೆಳೆಯುತ್ತಾ ಧರ್ಮಗಳಿಂದ, ಜಾತಿಗಳಿಗೆ, ಉಪಜಾತಿಗಳಿಗೆ, ಭಾಷೆಗಳಿಗೆ ಹಬ್ಬುತ್ತಾ, ಎಲ್ಲೆಲ್ಲಿ ಭಾರತೀಯ ಅರ್ಥದ ಸೆಕ್ಯುಲರಿಸಂ ಸಾಧ್ಯವೋ ಅಲ್ಲೆಲ್ಲಾ ಹಬ್ಬುತ್ತಿದೆ.

ಅಸ್ಪರ್ಶತೆಯನ್ನು ಹೋಗಲಾಡಿಸಲು, ಅಸ್ಪರ್ಶತೆ ’ರಾಷ್ಟ್ರೀಯ ಅಪರಾಧ’ವೆಂದು ಘೋಷಿಸಿ, ದೇಶದ ಎಲ್ಲಾ ಮಕ್ಕಳಿಗೂ ವಿದ್ಯಾಭ್ಯಾಸ ಕಡ್ಡಾಯವಾಗಿಸಿ, ಈ ಮಕ್ಕಳಿಗೆ ಯಾವುದೇ ಭೇಧವನ್ನು ತೋರುವವರನ್ನು ಉಗ್ರಶಿಕ್ಷೆಗೆ ಗುರಿಪಡಿಸುವ ಕಾನೂನುಗಳನ್ನು ಮಾಡದೆ, ಮೇಲ್ಜಾತಿ, ಕೆಳಜಾತಿ ಎರಡೂ ವರ್ಗಗಳನ್ನು ಓಲೈಸುವ ಕಾನೂನುಗಳನ್ನು ಮಾಡಿದ್ದುದು, ನಂತರ ದಲಿತರನ್ನು ಇನ್ನೂ ಹೆಚ್ಚಾಗಿ ಪೈಪೋಟಿಯಲ್ಲಿ ಓಲೈಸಲು ಹುಚ್ಚುಚ್ಚಾಗಿ ಕಾನೂನುಗಳನ್ನು ಮಾಡಿದ್ದುದು. ಉದಾಹರಣೆಗೆ ಜಾತಿನಿಂದನೆ ಕಾನೂನನ್ನೇ ತೆಗೆದುಕೊಳ್ಳಿ. ಇದರ ಉದ್ದೇಶ ಘನವಾದುದೇ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಈ ಕಾನೂನಿನ ಅನುಷ್ಟಾನ ಮಾತ್ರ ’ಸೆಕ್ಯುಲರ್’ ಆಗಿದೆ. ಯಾವುದೇ ಜಾತಿನಿಂದನೆಯನ್ನು ಅಪರಾಧವಾಗಿಸಬೇಕಾದ ನಮ್ಮ ಕಾನೂನು, ಕೇವಲ ದಲಿತರ ಜಾತಿನಿಂದನೆ ಮಾತ್ರ ಅಪರಾಧವೆಂದು ಪರಿಗಣಿಸುತ್ತದೆ. ಇಂದು ನೀವು ಮೇಲ್ಜಾತಿಯ ಬ್ರಾಹ್ಮಣರನ್ನು ’ಪುಳ್ಚಾರಿ’, ’ಅಯ್ಯಂಗಾರೀ’, ’ಜುಟ್ಟು’, ’ಥ್ರೆಡ್’, ಇನ್ನೂ ಏನೇನೋ ವಿಧವಾಗಿ ನಿಂದಿಸಬಹುದು. ಆದರೆ ದಲಿತರನ್ನು ಮಾತ್ರ ಜಾತಿನಿಂದನೆ ಮಾಡುವಂತಿಲ್ಲ. ಈ ಬ್ರಾಹ್ಮಣ ನಿಂದನೆ ತಮಿಳು ಸಿನಿಮಾಗಳ ಕಾಮೆಡಿ ಸೀನುಗಳಲ್ಲಿ ಭಾರೀ ಅತಿರೇಕಕ್ಕೆ ಹೋಗಿರುತ್ತದೆ. ನಮ್ಮ ಕಾನೂನುಗಳೇ ನಮ್ಮನ್ನು ಜಾತಿ/ಧರ್ಮಗಳ ಕೂಪಕ್ಕೆ ತಳ್ಳುತ್ತಿರುವಾಗ ಅದ್ಯಾವ ಪ್ರಜೆಗೆ "ರಾಷ್ಟ್ರ್‍ಈಯತೆ"ಯ ಅರಿವು ಮೂಡಲು ಸಾಧ್ಯ?

ಈ ಓಲೈಕೆಯ ದೆಸೆಯಿಂದಾಗಿ ಇಂದು ಉತ್ತರ ಭಾರತದಲ್ಲಿ ಜಾಟ್, ಬ್ರಾಹ್ಮಣ್, ಬನಿಯಾ ಎಂದೂ ದಕ್ಷಿಣದಲ್ಲಿ ವಣ್ಣಿಯಾರ್, ಚೆಟ್ಟಿಯಾರ್, ರೆಡ್ಡಿ, ಕಮ್ಮ, ಕಾಪು ಎಂದೂ, ಇನ್ನೂ ಕಂಡು ಕೇಳರಿಯದ ಜಾತಿಗಳೂ ರಾಜಕೀಯ ಪ್ರಾಧಾನ್ಯತೆಗಾಗಿ, ಓಲೈಕೆಗಾಗಿ ಬಡಿದಾಡುತ್ತಿವೆ. ಹಾಗೆಯೇ ನಮ್ಮಲ್ಲೂ ವೀರಶೈವ, ಒಕ್ಕಲಿಗ, ಕುರುಬ....ಇನ್ನೂ ಏನೇನೋ ಜಾತಿಗಳು ಪೈಪೋಟಿ ನಡೆಸುತ್ತಿವೆ. ಓಲೈಕೆಗೂ, ಭಯೋತ್ಪಾದನೆಗೂ ಏನಪ್ಪಾ ಸಂಬಂಧವೆನ್ನುವಿರಾ?

ಇನ್ನು ನೇರ ಆ ವಿಷಯಕ್ಕೆ ಬರೋಣ. ಧರ್ಮದ ಭಾವುಕ ಭಾವನೆ ಮತ್ತು ಜಗದ ಜಂಜಾಟಗಳಲ್ಲಿ ತೊಳಲುತ್ತಿದ್ದ ಕೆಲವು ಮುಸ್ಲಿಂ ಯುವಕರಿಗೆ ಹಣಕಾಸು ನೆರವು ನೀಡಿ, ಅವರುಗಳ ಧಾರ್ಮಿಕ ಭಾವನೆಗಳ ಯಶಸ್ವೀ ಶೋಷಣೆಯಾಗಿ, ಅವರನ್ನು ಭಯೋತ್ಪಾದಕರನ್ನಾಗಿಸಿರುವುದು ಕೆಲವು ವಿದೇಶೀ ಶಕ್ತಿಗಳು. ಈ ವಿದೇಶೀ ಶಕ್ತಿಗಳಿಗೂ ಮತ್ತು ಭಯೋತ್ಪಾದಕರಾಗಿರುವ ನಮ್ಮ ಭಾರತೀಯರಿಗೂ ಇರುವ ಸಾಮ್ಯತೆ ಧರ್ಮವೊಂದೇ. ಆ ಒಂದು ಸಾಮ್ಯತೆ ಹಲವಾರು ಭಾವುಕರನ್ನು ದುರ್ಬಲಗೊಳಿಸಿಬಿಡುತ್ತದೆ. ಇದು ಕೇವಲ ಧರ್ಮವಾಗಿರಬೇಕಿಲ್ಲ, ಭಾಷೆಯೂ ಆಗಬಹುದು. ಅಥವಾ ಹದಿಹರೆಯದ ಬಿಸಿರಕ್ತದ, ಏನನ್ನಾದರೂ ಡಿಫರೆಂಟಾಗಿ ಮಾಡಬೇಕೆನ್ನುವ ಯುವಕರ ದುರ್ಬಳಕೆಯೂ ಇದಾಗಬಹುದು. ಈ ಕುರಿತಾಗಿ ನನ್ನ "ಅಲ್ ಲಾಹ್ ಹು ಅಕ್ಬರ್, ಕೃಷ್ಣ ಕೃಷ್ಣ ಹರೇ ಹರೇ" ಎಂಬ ಲೇಖನವನ್ನೊಮ್ಮೆ ಓದಿ ನೋಡಿ. ಭಾಷಾ ಸಾಮ್ಯತೆಯಿರುವ ಎಲ್.ಟಿ.ಟಿ.ಇ. ಉಗ್ರರ ಕುರಿತು ಹಲವಾರು ತಮಿಳರು ಮೃದು ಧೋರಣೆಯನ್ನು ಹೊಂದಿರುತ್ತಾರೆ!

ನಿಮ್ಮನ್ನು ನೀವೇ ಪರೀಕ್ಷಿಸಿಕೊಂಡು ನೋಡಿ. ನೀವು ಮೆಚ್ಚುವ ನಟನೋ, ನಟಿಯೋ, ರಾಜಕಾರಣಿಯೋ, ಸಾಹಿತಿಯೋ, ಆಟಗಾರನೋ, ನೆರೆಮನೆಯವನೋ ನಿಮ್ಮ ಜಾತಿಯವನೆಂದು ತಿಳಿದಾಕ್ಷಣ ’ಇವ ನಮ್ಮವ’ನೆಂಬ ಸುಪ್ತ ನವಿರಾದ ಹೆಮ್ಮೆ ನಿಮ್ಮಲ್ಲುಂಟಾಗುತ್ತದೆ. ಇದು ನಮ್ಮ-ನಿಮ್ಮ ತಪ್ಪಲ್ಲ. ಇದು ನಮ್ಮ ಸ್ವತಂತ್ರ್ಯ ಭಾರತದ ಆಡಳಿತಾತ್ಮಕ/ಸಾಮಾಜಿಕ/ರಾಜಕೀಯ ವ್ಯವಸ್ಥೆ ನಮ್ಮನ್ನು ಆಧುನಿಕ ಪ್ರಪಂಚಕ್ಕೆ ಅಣಿಗೊಳಿಸಿರುವ ರೀತಿ.

ಇದು ನಮ್ಮ ರಾಜಕೀಯ/ಸಾಮಾಜಿಕ/ಆಡಳಿತಾತ್ಮಕ "ಸೆಕ್ಯುಲರಿಸಂ" ಆದರೆ, ನಮ್ಮ ವಿಚಾರವಾದಿ ಬುದ್ಧಿಜೀವಿಗಳು ಕೂಡ ಅದನ್ನು ಹೀಗೆಯೇ ವಿಶ್ಲೇಷಿಸಿಕೊಂಡಿದ್ದಾರೆ. ನೀವುಗಳು ಗಮನಿಸಿ ನೋಡಿ, ನಮ್ಮ ಬಹುಸಂಖ್ಯಾತ ಧರ್ಮದ ಒಬ್ಬ ಬುದ್ಧಿಜೀವಿ ತನ್ನ ಧರ್ಮದ ಆಚಾರ/ವಿಚಾರಗಳನ್ನು ಧಿಕ್ಕರಿಸಿ ಅವುಗಳನ್ನು ಅನಾಚಾರ/ವಿಕಾರಗಳಂತೆ ಚಿತ್ರಿಸಿ ತಮ್ಮ ನವೀನ ಚಿಂತನೆಗಳನ್ನು ಹರಿಬಿಟ್ಟಾಗ, ಆ ಚಿಂತನೆಯನ್ನು ಇತರೆ ಬುದ್ದಿಜೀವಿಗಳು ಶ್ಲಾಘಿಸಿ "ಬಂಡಾಯ ಸಾಹಿತ್ಯ"ವೆಂದು ವಿಂಗಡಿಸಿ ಕೊಂಡಾಡುತ್ತಾರೆ. ಹಾಗೆಯೇ ಅಲ್ಪಸಂಖ್ಯಾತ ಧರ್ಮದ ಬುದ್ದಿಜೀವಿಗಳು ತಮ್ಮ ಧರ್ಮದ ಅಂಧತೆಗಳನ್ನು ಉಲ್ಲೇಖಿಸಿ ಬರೆದು, ತಮ್ಮ ಧರ್ಮಾಂಧರ ಕೋಪಕ್ಕೆ ಗುರಿಯಾದಾಗ, ಬಹುಸಂಖ್ಯಾತ ಬುದ್ದಿಜೀವಿಗಳು ಅಷ್ಟಾಗಿ ಅವರ ಸಹಾಯಕ್ಕಾಗಿಯಾಗಲೀ, ಅವರ ಬೆಂಬಲಕ್ಕಾಗಿಯಾಗಲೀ ನಿಲ್ಲುವುದಿಲ್ಲ. ಉದಾಹರಣೆಗೆ, ತಸ್ಲೀಮಾ ನಸ್ರೀನ್ ಳ ಮೇಲೆ ಧರ್ಮಾಂಧರು ಆಕ್ರಮಣ ನಡೆಸಿದಾಗ ನಮ್ಮೆಲ್ಲಾ ಬುದ್ದಿಜೀವಿಗಳು ಅವಳ ಬೆಂಬಲಕ್ಕೆ ಎಷ್ಟರಮಟ್ಟಿಗೆ ನಿಂತರೆಂದು ನೀವುಗಳೇ ಮಾಧ್ಯಮಗಳ ವರದಿಯಲ್ಲಿ ನೋಡಿದ್ದೀರಿ. ಆದರೆ ಅದೇ ಬುದ್ದಿಜೀವಿ ಅಲ್ಪಸಂಖ್ಯಾತ ಕಲಾಕಾರನೊಬ್ಬ ಬಹುಸಂಖ್ಯಾತ ದೇವತೆಗಳ ಅಂಗಾಂಗಗಳ ಚಿತ್ರಿಸಿದ್ದನ್ನು ಬಹುಸಂಖ್ಯಾತರು ವಿರೋಧಿಸಿದಾಗ, ನಮ್ಮೆಲ್ಲಾ ಬುದ್ದಿಜೀವಿಗಳು ಆ ಕಲಾಕಾರನ ಬೆಂಬಲಕ್ಕೆ ನಿಂತು ಒಕ್ಕೊರಲಿನಿಂದ ಪ್ರತಿಭಟಿಸಿದರು. ಒಂದು ಧರ್ಮವನ್ನು ಖಂಡಿಸಿ ಬರೆದದ್ದು "ಬಂಡಾಯ ಸಾಹಿತ್ಯ"ವಾಗುವುದಾದರೆ, ಅದೇ ಇನ್ನೊಂದು ಧರ್ಮವನ್ನು ಖಂಡಿಸಿ ಬರೆದಿದ್ದು ಏಕೆ "ಬಂಡಾಯ"ವೆನಿಸದು? ಒಂದು ಧರ್ಮದ ಅವಹೇಳನದ ಸಾಹಿತ್ಯ "ಕ್ರಾಂತಿ"ಯೆನಿಸುವುದಾದರೆ, ಇನ್ನೊಂದು ಧರ್ಮದ ಅವಹೇಳನವೇಕೆ "ಸಮಾಜಘಾತುಕ"ವೆನಿಸಬೇಕು? ಇದು ನಮ್ಮ ಬೌದ್ಧಿಕ ವಿಕಾಸವೋ ವಿನಾಶವೋ ನಾನರಿಯೆ! ಒಟ್ಟಾರೆ ಇದು ಕೂಡ "ಭಾರತೀಯ ಸೆಕ್ಯುಲರಿಸಂ" ಎಂದು ಹೇಳಬಹುದು.

ವಿಚಾರ ಎಲ್ಲಿಂದೆಲ್ಲಿಗೋ ಹೋಗುತ್ತಿದೆ. ಇರಲಿ, ಮತ್ತೆ ಜಾತಿ/ಭಯೋತ್ಪಾದನೆಗೆ ಬರೋಣ. ಒಂದು ವೇಳೆ, ನಮ್ಮ ವೀರಶೈವ, ಒಕ್ಕಲಿಗ, ದಲಿತ, ಕುರುಬ ಅಥವಾ ಇನ್ಯಾವುದೇ ಜಾತಿಗಳಿಗೂ ಈ ರೀತಿ ತಮ್ಮ ತಮ್ಮ ಜಾತಿಯ ಬಹುಸಂಖ್ಯಾತರ ವಿದೇಶೀ ರಾಷ್ಟ್ರಗಳು ಇದ್ದು, ಪಾಕಿಸ್ತಾನದ ಮಾದರಿಯಲ್ಲೇ ಸಹಾಯಹಸ್ತ ಚಾಚಿ ಉಗ್ರರಾಗಿಸುವತ್ತ ಚಿತ್ತ ಹರಿಸಿದ್ದರೆ, ಇಂದು ಭಾರತದಲ್ಲಿ ಈ ಜಾತಿಯ ಉಗ್ರರುಗಳೂ ಇರುತ್ತಿದ್ದರೆಂದೇ ಅನಿಸುತ್ತದೆ. ಹಿಂದೊಮ್ಮೆ ಕೆಲವು ಸಿಖ್ಖರು ಉಗ್ರಗಾಮಿಗಳಾಗಿದ್ದಂತೆ! ಇಂದು ಭಾರತದ ಎಲ್ಲಾ ಜಾತಿಗಳೂ ತಮ್ಮ ತಮ್ಮ ಶಕ್ತಿಯ ಅನುಗುಣವಾಗಿ ಸಂವಿಧಾನಿಕ ಉಗ್ರವಾದವನ್ನು ರಾಜಾರೋಷವಾಗಿ ನಡೆಸುತ್ತಿವೆ. ಇದೊಂದು ರೀತಿ ’ಸಿವಿಲ್’ ಉಗ್ರವಾದವಾದರೆ, ಭಯೋತ್ಪಾದಕರದು ’ಕ್ರಿಮಿನಲ್’ ಉಗ್ರವಾದ! ಈ ಜಾತೀವಾದದ ಉಗ್ರರು ಸಾಮಾಜಿಕ ಸ್ವಾಸ್ಥ್ಯವನ್ನು ಕೆಡಿಸುತ್ತಿದ್ದರೆ, ಭಯೋತ್ಪಾದಕ ಉಗ್ರರು ಜನರನ್ನು ಕೊಲ್ಲುವಂತಹ ಕಾರ್ಯವನ್ನು ಮಾಡುತ್ತಿದ್ದಾರೆ. ಒಟ್ಟಾರೆ ಎರಡು ವಿಧಗಳೂ ದೇಶವನ್ನು ಅಧೋಗತಿಗೆ ಸೇರಿಸುತ್ತಿವೆ.

ಇನ್ನೂ ಬೆಂಗಳೂರಿನಲ್ಲಿ ಪ್ರಪ್ರಥಮವಾಗಿ ಬಾಂಬ್ ಸಿಡಿದಿದೆ ಎನ್ನುವಿರಾ? ಈ ಬಾಂಬ್ ನಮ್ಮ ಭರತನಹಳ್ಳಿಯಲ್ಲಿ ಎಂದೋ ಸಿಡಿದಿದೆ. ವಿಪರ್ಯಾಸವೆಂದರೆ, ಈ ಬಾಂಬನ್ನು ಸಿಡಿಸಿದವರೆಲ್ಲರನ್ನೂ ನಾವುಗಳು "ಮಹಾತ್ಮ"ರೆಂದು ಪೂಜಿಸುತ್ತಿದ್ದೇವೆ.

ಅಣಕ:

ಒಮ್ಮೆ ನನ್ನ ಬಂಧುವೊಬ್ಬರ ಹಳ್ಳಿಯ ಕ್ಷೌರಿಕ ತನ್ನ ಮಂಗಳವಾರದ ರಜಾ ಮೇಲಿದ್ದ. ಆದಿನ ಆ ಹಳ್ಳಿಯ ದಲಿತ ಪುಢಾರಿಯೊಬ್ಬ ಯಾವುದೋ ರಾಜಕೀಯ ಸಭೆಗೆ ಪಟ್ಟಣಕ್ಕೆ ಹೋಗಬೇಕಿದ್ದಿತು. ಸರಿ, ರಜಾ ಮಾಡಿದ್ದ ಕ್ಷೌರಿಕನ ಮನೆಗೆ ನೇರ ನಡೆದ. ತನಗೆ ಕ್ಷೌರ ಮಾಡೆಂದು ಪುಢಾರಿಯೂ, ನಾನು ರಜಾ ಎಂದು ಕ್ಷೌರಿಕನೂ ವಾಗ್ವಾದಿಸಿ, ಸುತ್ತಲೂ ಜನ ನೆರೆದರು. ಸರಿ, ದಲಿತ ಪುಢಾರಿ ಕ್ಷೌರಿಕನನ್ನು ’ಹಜಾಮ’ನೆಂದು ಮೂದಲಿಸಿ, ನಿನಗೆ ಪಾಠ ಕಲಿಸುತ್ತೇನೆಂದು ನಡೆದ. ಆ ದಿನ ಸಂಜೆಯ ವೇಳೆಗೆ ಪೊಲೀಸರು ಬಂದು ಕ್ಷೌರಿಕನನ್ನು ಜಾತಿನಿಂದನೆಯ ಮೇಲೆ ಬಂಧಿಸಿ, ಪಂಚಾಯಿತಿ ರಾಜೀ ನಡೆದು, ಕೊನೆಯಲ್ಲಿ ಆ ಕ್ಷೌರಿಕನು ತನ್ನ ಕ್ಷೌರವೃತ್ತಿಯನ್ನು ಸಂಪೂರ್ಣ ಖೈದು ಮಾಡಿ, ಬೇರೆ ಉದ್ಯೋಗವನ್ನು ಹುಡುಕಿಕೊಳ್ಳುವಲ್ಲಿ ಪರ್‍ಯವಸಾನಗೊಂಡಿತು.

ಇದು ನಮ್ಮ ಸೆಕ್ಯುಲರಿಸಂ ನ ಒಂದು ಸ್ಯಾಂಪಲ್ ಘಟನೆ!

ಯಾರಿಗೆ ಬಂತು, ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ?