ಪುನೀತ್ ರಾಜಕುಮಾರ್ - A victim of VIP Syndrome?

 ಕನ್ನಡದ ನಟ ಪುನೀತ್ ರಾಜಕುಮಾರ್ ಅವರನ್ನು ಪರೀಕ್ಷಿಸಿ ಚಿಕಿತ್ಸೆ ನೀಡಿದ್ದ ಅವರ ಕುಟುಂಬದ ವೈದ್ಯರಾದ ರಮಣ ರಾವ್ ಅವರ ಮೇಲೆ ವೈದ್ಯರ ನಿರ್ಲಕ್ಷ್ಯದ ಮೊಕದ್ದಮೆಯನ್ನು ಅಭಿಮಾನಿಯೊಬ್ಬರು ದಾಖಲಿಸಿದ್ದಾರೆ ಎಂಬ ಸುದ್ಧಿಯೊಂದನ್ನು ಓದಿದೆ. ಸಮಸ್ಯೆಯ ಗಂಭೀರತೆಯನ್ನು ನಿರ್ಲಕ್ಷಿಸಿ ಹತ್ತಿರದಲ್ಲೇ ಇದ್ದ ಆಸ್ಪತ್ರೆಗೆ ಬದಲಾಗಿ ದೂರದ ಆಸ್ಪತ್ರೆಗೆ ಚಿಕಿತ್ಸೆಗೆ ಕಳುಹಿಸದ್ದಲ್ಲದೆ CPR ಮುಂತಾದ ಪ್ರಾಥಮಿಕ ಚಿಕಿತ್ಸಾ ಕ್ರಮಗಳನ್ನು ಅನುಸರಿಸದೆ, ಆಂಬ್ಯುಲೆನ್ಸ್ ಕರೆಯದೆ ಪುನೀತ್ ಸಾವಿಗೆ ಕಾರಣರಾಗಿದ್ದಾರೆ ಎಂದು ದೂರಿನ ಸಂಕ್ಷಿಪ್ತ ವರದಿಯನ್ನು ಪತ್ರಿಕೆಗಳು ಪ್ರಕಟಿಸಿದ್ದವು.


ವೈದ್ಯರ ನಿರ್ಲಕ್ಷ್ಯ ಪ್ರಕರಣಕ್ಕೆ ಡಾ.ರಮಣ ರಾವ್ ಅವರ ಪ್ರಸಂಗ ಸರಿಯಾದ ಪ್ರಸಂಗವೇ ಅಲ್ಲವೇ ಗೊತ್ತಿಲ್ಲ! ಆದರೆ ರಾಜಕುಮಾರ್ ಅವರ ಕುಟುಂಬದೊಟ್ಟಿಗೆ ಅವರು ಹೊಂದಿರುವ ಬಾಂಧವ್ಯ, ಮತ್ತವರ ಹಳ್ಳಿಗರಿಗೆ ನಡೆಸುವ ಉಚಿತ ವೈದ್ಯಕೀಯ ಸೇವೆ ಮತ್ತಿತರೆ ಸಾಮಾಜಿಕ ಸೇವೆಗಳ ಹಿನ್ನೆಲೆಯಲ್ಲಿ ಅವರು ನಿರ್ಲಕ್ಷಿಸಿರಲಾರರು ಎಂಬ ಸದಭಿಪ್ರಾಯವನ್ನು ಸಾಕಷ್ಟು ಜನರು ವ್ಯಕ್ತಪಡಿಸಿದ್ದಾರೆ. ಆದರೆ ಅಭಿಮಾನಿಗಳ ಈ ಮೊಕದ್ದಮೆಯನ್ನು ಕೋರ್ಟ್ ಎತ್ತಿಕೊಳ್ಳಲೇಬೇಕು, ಈ ಪ್ರಕರಣ ಎಷ್ಟೇ ದುರ್ಬಲ ಎನಿಸಿದರೂ!

ಏಕೆಂದರೆ ದೇಶದ ತುಂಬೆಲ್ಲಾ ಆರೋಗ್ಯ ವಿಮೆ ಸ್ಕೀಮುಗಳು ಕಾಲಿಟ್ಟು ಹೆಮ್ಮಾರವಾಗುತ್ತಿದ್ದಂತೆಯೇ ಅದರೊಟ್ಟಿಗೇ ಕಾಲಿಟ್ಟ ಮೆಡಿಕಲ್ malpractice ಸಹ ಹೆಮ್ಮರವಾಗಿ ಬೆಳೆದುಬಿಟ್ಟಿದೆ. ಡಾಕ್ಟರರು, ಬೀದಿಬೀದಿಯಲ್ಲಿಯೂ ಇರುವ ನರ್ಸಿಂಗ್ ಹೋಮುಗಳು ಅವುಗಳ ಹುನ್ನಾರವನ್ನು ಜನರು ಅನುಭವಿಸಲಾರದೆ ಇಲ್ಲ. ಈ ಕುರಿತು ಸಾಕಷ್ಟು ಹಗರಣಗಳು ಸುದ್ದಿ ಮಾಡಿವೆಯಲ್ಲವೇ!

ನಾ ಕಂಡ ದಾವಣಗೆರೆಯಲ್ಲಿ ಎಲಿ, ನಿರ್ಮಲ ಕೇಸರಿ, ಶಫೀ, ರಂಗನಾಥ, ಶಿವಲಿಂಗಪ್ಪ ಡಾಕ್ಟ್ರು ಔಷಧಿ ಕೊಟ್ರೆ, ಕಾಫಿ ಪುಡಿ ಶೆಟ್ರು ಮಂತ್ರರಿಸಿದರೆ ಸಾಕು ಎಂಬಂತಿದ್ದ ಜನ, ಇಂದು ಊರು ತುಂಬಾ ನರ್ಸಿಂಗ್ ಹೋಮ್ಗಳು, ಮಲ್ಟಿ ಸ್ಪೆಷಲ್ ಹಾಸ್ಪಿಟಲ್ಲುಗಳು ನಾಯಿಕೊಡೆಯಂತಿರುವುದಲ್ಲದೆ ಎರೆಡೆರೆಡು ಮೆಡಿಕಲ್ ಕಾಲೇಜುಗಳ ಆಸ್ಪತ್ರೆಗಳು ಇದ್ದರೂ ಮಂಗಳೂರಿನ ಎನಪೋಯ ಎನಪೋಯ ಎಂಬ ಆಸ್ಪತ್ರೆಗೆ ನಿತ್ಯ ನೂರಾರು ಜನ ದೌಡಾಯಿಸುತ್ತಿದ್ದಾರೆ. ಜನರನ್ನು ಎನಪೋಯಕ್ಕೆ ಕಳಿಸಲು ಸ್ಪೆಷಲ್ ಬಸ್ಸುಗಳ ಉದ್ಯಮವೇ ಆರಂಭವಾಗಿದೆ ಎಂದರೆ ದಾವಣಗೆರೆ ರೋಗಿಗಳ ಬೀಡಾಗಿದೆಯೇ!?

ಇದು ಕೇವಲ ದಾವಣಗೆರೆಯ ಸಮಸ್ಯೆಯಲ್ಲದೆ ಅನೇಕ ನಗರಗಳ ಸಮಸ್ಯೆಯಾಗಿದೆ.

ಬೆಂಗಳೂರಿನ ಒಂದು ನಸಿಂಗ್ ಹೋಮಿನಲ್ಲಿ ಯಾವುದೋ ಕಾರ್ಯನಿಮಿತ್ತ ಕಾಯುತ್ತಾ ಕುಳಿತಾಗ ನನಗೆ ಕೇಳಿಸಿದ್ದು, ಗ್ಯಾಸ್ ಟ್ರಬಲ್ ಅಂತ ಬಂದವನಿಗೆ ಆಂಜಿಯೋಗ್ರಾಂ ಮಾಡಿಸಲು ಡಾಕ್ಟರ್ ಹೇಳಿದರೆಂದು ಒಬ್ಬ ರೋಧಿಸುತ್ತಿದ್ದದ್ದು. ಇನ್ನೊಬ್ಬ ತಾಯಿ ತನ್ನ ಹೈಸ್ಕೂಲ್ ಮಗನಿಗೆ ಜ್ವರವೆಂದು ಬಂದರೆ, ಆತನಿಗೆ ಹೈ ಬಿಪಿ ಇದೆ, ಅಡ್ಮಿಟ್ ಮಾಡಿಸೆಂದಿರುವರೆಂದು...ಇತ್ಯಾದಿ ಇತ್ಯಾದಿ ಸಂಭಾಷಣೆಗಳು ಕೇಳಿಬರುತ್ತಿದ್ದವು! ಒಟ್ಟಾರೆ ಮೆಡಿಕಲ್ ಮಾಲ್ ಪ್ರಾಕ್ಟೀಸ್ ಬಗ್ಗೆ ಕಾನೂನು ಮಾಡದೇ ಆರೋಗ್ಯವಿಮೆ ಬಂದರೆ ಏನಾಗಬಹುದೋ ಅದೆಲ್ಲವೂ ಇಂದು ಆಗುತ್ತಿದೆ. ಇನ್ಸೂರೆನ್ಸ್ ಕೊಡುತ್ತದಲ್ಲ ನಮಗೇನು ಎಂದು ಅಂಡೆತ್ತಿ ಹೂಸಿಸುವವನು ಕೂಡ ಆಂಜಿಯೋಗ್ರಾಮ್ ಅಥವಾ ತೆರೆದೆದೆಯ ಶಸ್ತ್ರಚಿಕಿತ್ಸಗೆ ಅಂಜದೆ ಎದೆಯೊಡ್ಡುತ್ತಾನೆ. ಇನ್ಸೂರೆನ್ಸ್ ಇಲ್ಲದವರಿಗೆ ಸರ್ಕಾರಿ ಆರೋಗ್ಯಭಾಗ್ಯ, ಯಶಸ್ವಿನಿ, ಇತರೆ ವಿಮೆಗಳಿವೆ. ಹಾಗಾಗಿ ವಿಮೆ ಇಲ್ಲದವನೇ ಇಂದು ದರಿದ್ರನು.

ಎರಡು ದಶಕಗಳ ಹಿಂದೆ ಯಾರೂ ನೆಗಡಿ, ಕೆಮ್ಮು, ವಿಷಮಶೀತ ಜ್ವರ, ಟೈಫಾಯ್ಡ್ ಗಳಿಗೆ ಆಸ್ಪತ್ರೆ ಸೇರುತ್ತಿರಲಿಲ್ಲ. ಮನೆಯಲಿದ್ದೇ ಹತ್ತಿರದ ಕ್ಲಿನಿಕ್ಕಿನಲ್ಲಿ ಔಷಧಿ ಪಡೆಯುತ್ತಿದ್ದರು. ಯಾವಾಗ ಆರೋಗ್ಯವಿಮೆ, ಆರೋಗ್ಯಭಾಗ್ಯ, ಯಶಸ್ವಿನಿ ಯೋಜನೆಗಳು ಬಂದವೋ ವೈದ್ಯರು ರೋಗಿಗಳನ್ನು ಪ್ರತಿಯೊಂದಕ್ಕೂ ಅಡ್ಮಿಟ್ ಮಾಡಿಸಿಕೊಳ್ಳಲು ಶುರುಮಾಡಿದರು. ಅವರುಗಳ ಈ ವಿಮಾಶೋಷಣೆಯ ಪರಿಣಾಮ ಇಂದು ಮಿತಿ ಮೀರಿದೆ. ಇತ್ತೀಚೆಗೆ ಕರ್ನಾಟಕ ಖಾಸಗಿ ಆಸ್ಪತ್ರೆಗಳಿಗೆ ಲಗಾಮು ಹಾಕುವ ಯೋಜನೆಯೊಂದನ್ನು ಹಾಕಿಕೊಂಡಿತ್ತು. ಅದು ಹೇಗೆ ಅನುಷ್ಠಾನಗೊಂಡಿದೆಯೋ ಗೊತ್ತಿಲ್ಲ! ಆದರೆ ಇದನ್ನೇ ವಿದೇಶಗಳಲ್ಲಿ medical malpractice control ಎನ್ನುವುದು. ಆರೋಗ್ಯ ವಿಮೆ ಇರುವೆಡೆಯೆಲ್ಲೆಲ್ಲ ಈ ರೀತಿಯ ನಿಯಂತ್ರಣ ಸೂತ್ರದ ಕಾನೂನುಗಳಿವೆ. ಹಾಗೆಂದು ಇಂತಹ ಕೇಸುಗಳನ್ನು ರಾತ್ರೋರಾತ್ರಿ ಸೃಷ್ಟಿ ಮಾಡಿದುವಲ್ಲ. ಇಂತಹ ಕಾನೂನುಗಳನ್ನು ಪುನೀತ್ ಅವರ ಅಭಿಮಾನಿಗಳು ಹಾಕಿರುವ ಕೇಸುಗಳಂತೆಯೇ ಜನರು ಕೇಸುಗಳನ್ನು ಹಾಕಿ ವಿಕಸಿಸುತ್ತ ಸೃಷ್ಟಿಗೊಂಡವು.

ಹಾಗಾಗಿ ಕೋರ್ಟ್ ಪುನೀತ್ ಅಭಿಮಾನಿಗಳ ಕೇಸ್ ಅನ್ನು ಒಂದು medical malpractice ಶುಭಾರಂಭದ ಉದ್ದೇಶಕ್ಕಾಗಿಯಾದರೂ ಕೈಗೆತ್ತಿಕೊಳ್ಳಬೇಕು.

ಇನ್ನು ಹೈದರಾಬಾದಿನ KIMS ಆಸ್ಪತ್ರೆಯಲ್ಲಿ ಹಿರಿಯ ಹೃದಯತಜ್ಞರಾದ ಡಾ. ನಿಸರ್ಗ ಹೀಗೆ ಹೇಳಿದ್ದಾರೆ:
"ಇಷ್ಟು ವರ್ಷ ಈ ಮೆಡಿಕಲ್ ಫೀಲ್ಡ್ ನಲ್ಲಿ ಕೆಲಸ ಮಾಡಿದ ಮೇಲೆ ಅನ್ನಿಸಿದ್ದು ಯಾವ ಸಾವನ್ನೂ ನಾವು ನಿಲ್ಲಿಸಲಾಗಲ್ಲ, ಹಾಗಿದ್ದರೂ ಪ್ರಯತ್ನದ ಮುಂದೆ ಯಾವುದೂ ಅಲ್ಲ. ನಾವು ವೈದ್ಯರುಗಳು ರೋಗಿಯ ಕೊನೆ ಉಸುರಿರುವವರೆಗೂ ಪ್ರಾಣ ಉಳಿಸಲು ಹೋರಾಟದ ಕಂಕಣ ಕಟ್ಟಿರುತ್ತೇವೆ. ಆದರೂ ಕೆಲವು ಸಾವುಗಳು ಸಂಭವಿಸಿದಾಗ ಹೀಗೆ ಮಾಡಿದ್ದರೆ/ಹಾಗೆ ಮಾಡಿದ್ದರೆ ತಪ್ಪಿಸಬಹುದಾಗಿತ್ತೇನೋ ಅನ್ನಿಸುವುದುಂಟು. ಅದರಲ್ಲೂ ಇನ್ನೂ ವಯಸ್ಸು ಸಣ್ಣದಾಗಿ, ತುಂಬಾ ಬಾಳಿ ಬದುಕ ಬೇಕಾಗಿರುವವರು ನಮ್ಮ ಕಣ್ಣ ಮುಂದೇನೇ ಕಳೆದುಕೊಂಡಾಗ ಮನಸ್ಸು ಮುದುಡುತ್ತದೆ. ವೈದ್ಯ ವೃತ್ತಿಯಲ್ಲಿದ್ದೂ, ಎಷ್ಟೋ ಸಾವುಗಳನ್ನ ನೋಡಿ ಕೂಡ, ಕೆಲವು ಸಾವುಗಳು ತುಂಬಾ ದಿನಗಳ ಕಾಲ ಕಾಡುವುದಿದೆ. ಮತ್ತೆ ಮರೆತು ಮುಂದೆ ಸಾಗುವ ಅನಿವಾರ್ಯತೆ.
Genetics ಹೃದಯ ಖಾಯಿಲೆಗೆ ತುಂಬಾ influence ಮಾಡುತ್ತೆ. ತಂದೆ ತಾಯಿಯರಲ್ಲಿ ಈ ಖಾಯಿಲೆ ಇದ್ದು, ಇಬ್ಬರಿಗೂ ಇದ್ದು, ಅದೂ ತೀವ್ರವಾಗಿ ಇದ್ದು, ಅವರಿಗೂ ಚಿಕ್ಕ ವಯಸ್ಸಿನಲ್ಲಿ ಬಂದಿದ್ದರೆ, ಸಹೋದರರಿಗೆ ತೊಂದರೆಯಿದ್ದರೆ, ಮಕ್ಕಳಿಗೆ 'ಬೇಗ' ಬಳುವಳಿಯಾಗಿ ಬರುವುದರಲ್ಲಿ ಯಾವ ಸಂಶಯವೂ ಇಲ್ಲ.(ನಾನು ಇತ್ತೀಚೆಗೆ ಒಬ್ಬರ ಹೃದಯ bypass ಶಸ್ತ್ರ ಚಿಕಿತ್ಸೆ ಮಾಡಿದೆ. ಅವರು ಮೂರನೆಯವರು. ಅವರ ಇನ್ನಿಬ್ಬರು ಸಹೋದರರಿಗೆ ಮುಂಚೆ ಇದೇ operation ಮಾಡಿದ್ದೆ. ಮೂವರೂ ದೃಢ ಕಾಯದವರು, ಇಬ್ಬರು ರಣಜಿ ಟೀಮ್ ನಲ್ಲಿ ಇದ್ದು ಕ್ರಿಕೆಟ್ ಆಡಿದವರು).
ಎದೆ ನೋವು, ತುಂಬಾ ಬೆವರುವುದು, ಅತಿಯಾಗಿ ಸೋಲು ಬರುವುದು, ಉಬ್ಬಸ, ಇವೆಲ್ಲ ಖಂಡಿತಾ ಹೃದಯದ ತೊಂದರೆಯಿಂದ ಆಗುವ ಲಕ್ಷಣಗಳು. ಎಷ್ಟೇ ವಯಸ್ಸಾಗಿರಲಿ, ಈ ಮೇಲಿನ ತೊಂದರೆಗಳನ್ನ ಎಂದೂ ಕಡೆಗಣಿಸಬಾರದು. (ವೈದ್ಯರೂ ಕೂಡ).
ಹಾರ್ಟ್ ಅಟ್ಯಾಕ್ ಅಂದರೆ, ಹೃದಯಕ್ಕೇ ರಕ್ತ ಸಂಚಾರ ಮಾಡುವ coronary artery (ಸುಮಾರು 2 mm ಅಷ್ಟೇ ಗಾತ್ರದ ಚಿಕ್ಕ ರಕ್ತನಾಳಗಳು) ಮೊದಲೇ ಬ್ಲಾಕ್ ಇದ್ದು, ಅದರ ಮೇಲೆ ರಕ್ತ ಹೆಪ್ಪುಗಟ್ಟುವುದು. ಆ ರಕ್ತ ಹೆಪ್ಪುಗಟ್ಟುವಿಕೆ ಎಷ್ಟು ಸಮಯ ಬೇಕಾದರೂ ತೆಗೆದುಕೊಳ್ಳಬಹುದು. ಹೆಚ್ಚಿನವರಿಗೆ ಒಂದಲ್ಲ ಒಂದು ಸೂಚನೆಯನ್ನ ಕೊಡುತ್ತದೆ. ಎದೆ ನೋವು ಇರುವ ಸಂದರ್ಭದಲ್ಲಾದರೆ ECG ವ್ಯತ್ಯಯವಾಗುತ್ತದೆ. ECG ಓದುವುದು ಅಷ್ಟು ಸುಲಭವಲ್ಲ. ಇಬ್ಬರು ಕಾರ್ಡಿಯೋಲಾಜಿಸ್ಟ್ ಗಳಲ್ಲೇ ಭಿನ್ನಾಭಿಪ್ರಾಯ ಬರುವಷ್ಟು ಕೆಲವೊಮ್ಮೆ ಕ್ಲಿಷ್ಟ. ECG ನಾರ್ಮಲ್ ಇದೆ ಅಂದರೂ ಕೂಡ, 2D Echocardiogram ಮತ್ತು ರಕ್ತ ಪರೀಕ್ಷೆ ಮಾಡಲೇ ಬೇಕು. ರಕ್ತ ಪರೀಕ್ಷೆಯಲ್ಲಿ ಕಾರ್ಡಿಯಾಕ್ enzyme ಗಳು ಅನಿವಾರ್ಯವಾಗಿ ಹಾರ್ಟ್ ಅಟ್ಯಾಕ್ ನಲ್ಲಿ ಜಾಸ್ತಿ ಆಗಿರುತ್ತೆ. ಟ್ರೋಪೋನಿನ್ ಅನ್ನುವ ಈ ರಾಸಾಯನಿಕ ಪದಾರ್ಥ, ಹೃದಯದ ಸ್ನಾಯುಗಳು ಸಾಯುತ್ತಿರುವುದನ್ನ ಬಹುಬೇಗ ತೋರಿಸುತ್ತದೆ. ಕೆಲವೊಮ್ಮೆ ಕಾರ್ಡಿಯಾಕ್ enzyme ಮಾಡದೇ ಹಾರ್ಟ್ ಅಟ್ಯಾಕ್ miss ಆಗಿರುವುದೂ ಇದೆ. ECG ಚೆನ್ನಾಗಿಲ್ಲ ಅಂದರೆ ಖಂಡಿತಾ ಮಾಡಲೇಬೇಕು. ರೋಗಿಯನ್ನ ಯಾವ ಕಾರಣಕ್ಕೂ ಹೆಚ್ಚು move ಮಾಡಬಾರದು. ಸ್ವಲ್ಪವೂ strain ಆಗಬಾರದು. ಯಾಕೆಂದರೆ ಹಾಗಾದಾಗ ಹೃದಯ ಮತ್ತೂ ಹೆಚ್ಚು ಕೆಲಸ ಮಾಡಬೇಕು, ಆಗ ಸೋಲುತ್ತದೆ.
ಒಳ್ಳೆಯ gym ಮಾಡುತ್ತಿದ್ದೆ, ನಾನಿನ್ನೂ ಬಹಳ ಸಣ್ಣ ವಯಸ್ಸಿನವ ಅನ್ನುವ ಕಲ್ಪನೆಯಿಂದ ಯಾವತ್ತೂ ನೆಗ್ಲೆಕ್ಟ್ ಮಾಡಲೇ ಬಾರದು. Gym is not equivalent to TMT . TMT positive ಇರುವವರೂ ಕೂಡ TMT ಮಾಡುವಾಗ ಚೆನ್ನಾಗಿಯೇ ಓಡಿರುತ್ತಾರೆ, ಅವರಿಗೇನೂ ಎದೆ ನೋವು ಬಂದಿರಬೇಕೆಂದಿಲ್ಲ. Blockage ಇರುವವರು gym ನಲ್ಲಿ/ TMT ಯಲ್ಲಿ ಎದೆನೋವು, ಉಬ್ಬಸ ಕಾಣಿಸಿಕೊಳ್ಳಲೇ ಬೇಕೆಂಬ ನಿಯಮವಿಲ್ಲ. ಒಳ್ಳೆಯ ಒಂದು ಘಂಟೆ ಜಿಮ್ ಮಾಡುವವರೂ ಹತ್ತು ನಿಮಿಷ TMT ಮಾಡಿದಾಗ ಪಾಸಿಟಿವ್ ಬಂದಿರುವುದಿದೆ. ಹಾಗಿದ್ದಾಗ ಅವರಿಗೆ ಆದಷ್ಟು ಬೇಗ coronary angiogram ಮಾಡಬೇಕು.
ಇನ್ನು ಹಾರ್ಟ್ ಅಟ್ಯಾಕ್ ವಿಚಾರಕ್ಕೆ ಬರುವುದಾದರೆ, ಆ golden hour ನಲ್ಲಿ ಯಾರು ಎಷ್ಟು ಜಾಣ್ಮೆ ವಹಿಸಿ, ಹೃದಯದ ಸಾವನ್ನ ಕಡಿಮೆ ಮಾಡುತ್ತಾರೋ ಅವರೇ ಗೆದ್ದ ಹಾಗೆ. ನಮ್ಮ ದೇಶದಲ್ಲಿ Public defibrillator ಗಳ ಕೊರತೆ ಇರುವುದರಿಂದ, ಎಷ್ಟೋ ರೋಗಿಗಳು ಆಸ್ಪತ್ರೆ ತಲುಪುವುದೇ ಇಲ್ಲ. ಹಾರ್ಟ್ ಅಟ್ಯಾಕ್ ಆದಾಗ heart can fibrillate . ಅದು ಒಂದು pre death event . ಹೃದಯ ತನ್ನ ಪಂಪಿಂಗ್ ಮಾಡುವುದನ್ನ ನಿಲ್ಲಿಸಿ, ತರತರನೇ ನಡುಗುತ್ತಾ ಕೂರುವುದೇ fibrillation . ಆಗ ಮೆದುಳಿಗೆ/ ಬೇರೆ ಯಾವುದೇ organ ಗೆ ರಕ್ತ ಸಂಚಾರ ಇರುವುದಿಲ್ಲ. Fibrillation ಗೆ ಉತ್ತರ Defibrillation shock ಮಾತ್ರ. ಎದೆ ಒತ್ತಿ CPR ಮಾಡಿದರೂ ಉಪಯೋಗ ಆಗುವುದಿಲ್ಲ. Cardiac arrest ನಲ್ಲಿ ಮಾತ್ರ CPR ಖಂಡಿತಾ ಜೀವ ಉಳಿಸಬಲ್ಲದು. ಒಬ್ಬ ವ್ಯಕ್ತಿ ಹಾಗೆ ಕುಸಿದಾಗ, Fibrillation ಆಗುತ್ತಿದೆ ಅಂತ ಗೊತ್ತಾಗುವುದು ECG ಯಿಂದ ಮಾತ್ರ. ಆಂಬುಲೆನ್ಸ್ ನಲ್ಲಿ ECG monitor ಇರುತ್ತದೆ. Shock ಇರುತ್ತದೆ, ಜೀವವನ್ನ ಕೊನೇಪಕ್ಷ ಆಸ್ಪತ್ರೆ ವರೆಗೆ ಹಿಡಿದಿಡಬಹುದು. ಒಬ್ಬ technician ಕೂಡ ಇದನ್ನ ಮಾಡಬಲ್ಲ. ವೈದ್ಯರಾದವರು ಖಂಡಿತಾ ಯಾವುದೇ cardiac emergency ಯಲ್ಲಿ ambulance ನ್ನೇ prefer ಮಾಡುವುದು. There is something called VIP syndrome in medical field . ರೋಗಿ VIP ಆಗಿದ್ದರೆ ವೈದ್ಯರ ಚಿತ್ತ ಸರಿಯಾಗಿ ಕೆಲಸ ಮಾಡದೇ ಚಿಕಿತ್ಸೆಯಲ್ಲಿ ವ್ಯತ್ಯಯ ಆಗುವ ಸಾಧ್ಯತೆ ಇರಬಹುದೆಂದು ಆ ಸಿಂಡ್ರೋಮ್ ಹೇಳುತ್ತದೆ!
ರೋಗಿ ಆಸ್ಪತ್ರೆಗೆ ಬಂದ ಮೇಲೆ ಬದುಕಿಯೇ ಬದುಕುತ್ತಾನೆಂದಲ್ಲ, at least Emergency Angiogram ಮಾಡಿ ರಕ್ತ ಸಂಚಾರಕ್ಕೆ ಮತ್ತೆ ಸುವ್ಯವಸ್ಥೆ ಮಾಡಬಹುದು. ECMO ದಂತಾ modern machine ಗಳು ಕಾರ್ಡಿಯಾಕ್ ಅರೆಸ್ಟ್ ಆಗಿರುವವರನ್ನೂ ಹೊರಕ್ಕೆ ತಂದಿವೆ. ಕೊನೆಗೂ ಇವೆಲ್ಲ postmortem ಗಳು. ಮನೆಯಲ್ಲಿ ಚೆನ್ನಾಗಿದ್ದು, ಆಸ್ಪತ್ರೆ ಹತ್ತಿರವಿದ್ದು, ದಾರಿ ಮಧ್ಯದಲ್ಲಿ ಯಾರಿಗೂ ಹೀಗಾಗಬಾರದು.
ಎಚ್ಚರವಿರಲೆಂದು ಈ ಬರಹ. ಬದುಕಿದ್ದರೆ, ಇನ್ನೂ ನೂರು ಕಾಲ ಬಾಳಬಹುದಿತ್ತಲ್ಲ ಅನ್ನೋ ಕೊರಗಷ್ಟೇ."

ಹಿರಿಯ ಹೃದಯತಜ್ಞರ ಈ ಅಭಿಪ್ರಾಯದ ಹಿನ್ನೆಲೆಯಲ್ಲಿ ಪುನೀತ್ ಅವರ ವಿಚಾರದಲ್ಲಿ ಆಂಬ್ಯುಲೆನ್ಸ್ ಇಲ್ಲದ್ದು, VIP ಸಿಂಡ್ರೋಮ್ ವಿಚಾರಗಳು ಮಹತ್ವದ್ದೆನಿಸುತ್ತವಲ್ಲವೇ!

No comments: