ಚೋಲಿ ಕೆ ಪೀಚೆ ಕ್ಯಾ ಹೈ, ಚೋಲಿ ಕೆ ಪೀಚೆ? ಚುನರಿ ಕೆ ನೀಚೆ ಕ್ಯಾ ಹೈ, ಚುನರಿ ಕೆ ನೀಚೆ?

ಚೋಲಿ ಕೆ ಪೀಚೆ ಕ್ಯಾ ಹೈ, ಚೋಲಿ ಕೆ ಪೀಚೆ? ಚುನರಿ ಕೆ ನೀಚೆ ಕ್ಯಾ ಹೈ, ಚುನರಿ ಕೆ ನೀಚೆ?

ದಿಢೀರನೆ ಈಗ ಗತಕಾಲದ ಸುಂದರಿ ಮಾಧುರಿ ನೆನಪಾಗಲು ಕಾರಣವೆಂದರೆ ನನ್ನ ಟ್ಯಾಗ್ಲೈನ್ ಕುರಿತು ಇತ್ತೀಚೆಗೆ ಹೆಚ್ಚು ಯುವ ಮನಸ್ಸುಗಳು ಮೇಲಿನ ಹಾಡಿನಂತೆಯೇ ಕೇಳುತ್ತಿವೆ. ನಾನು ಹದಿಹರೆಯದಲ್ಲಿದ್ದಾಗ ಪಡ್ಡೆಯಾಗಿದ್ದಾಗ ಇಂದಿನ ದೈವಿಕ ಯುವಪಡೆಯಂತಿರಲಿಲ್ಲದಿದ್ದರೂ ಅವರಂತೆಯೇ ಆತುರಗಾರನಾಗಿದ್ದೆ. ಹಾಗೆಂದು ಅಂದಿನ ನನ್ನ ಖಾಸಾ ಸ್ನೇಹಿತೆ ಸಮಾಧಾನದಿಂದ ಕುಚೋದ್ಯವಾಗಿ ಹೇಳುತ್ತಿದ್ದಳು. ಹಾಗಾಗಿ ನನ್ನ ಟ್ಯಾಗ್ಲೈನ್ ಕುರಿತಾದ ಕಳವಳವನ್ನು ಅರ್ಥ ಮಾಡಿಕೊಳ್ಳಬಲ್ಲೆ.

ಚೋಲಿ ಕೆ ಪೀಚೆ ಚುನರಿ ಕೆ ನೀಚೆ ಏನಿದೆಯೆಂದು ಮಾಧುರಿ ಎದೆ ಹಾರಿಸುತ್ತಾ, ಸೊಂಟ ತಿರುವುತ್ತ ದಿಲ್ ದಿಲ್ ದಿಲ್ ಎಂದು ಏರುದನಿಯಲ್ಲಿ ಉನ್ಮತ್ತಳಾಗಿ ಹೇಳಿದರೂ ಅಲ್ಲಿ ಕೇವಲ ದಿಲ್ ಮತ್ತು ದಿಲ್ ಮಾತ್ರ ಇದೆ. ಪ್ರೇಮಕ್ಕೆ ಮಿಡಿಯುವ ವಿಶಾಲ, ನಿಷ್ಠ, ಪ್ರಮಾಣಿಕ ದಿಲ್!

ಕಳೆದ ಹತ್ತು ವರ್ಷಗಳಿಂದ ಬಳಸುತ್ತಿರುವ ನನ್ನ ಟ್ಯಾಗ್ಲೈನ್ ಇತ್ತೀಚಿನದಲ್ಲ. ಆದರೆ ಇದನ್ನು ಪ್ರಶ್ನಿಸುತ್ತಿರುವವರು ನನ್ನ ನವನವೀನ ಯುವಮಿತ್ರರು. ನಾನು ಈ ಹಿಂದೆಯೇ ಅನೇಕ ಸಾರಿ ಈ ಪ್ರಶ್ನೆ ಬಂದಾಗ ಏಕೆ ಈ ಟ್ಯಾಗ್ಲೈನ್ ಎಂದು ಹೇಳಿದ್ದೇನೆ. ನೀವು ಹೇಳುವ ಐತಿಹಾಸಿಕ ಅಭಿಮಾನದ ಭಾರತ ಬೇರೆ. ನಾನು ಹೇಳುತ್ತಿರುವುದು ಪ್ರಜಾಪ್ರಭುತ್ವದ ಇಂದಿನ ವಾಸ್ತವದ ಭಾರತ. ಅದು ಹೇಗೆ ಹುಚ್ಚಾಸ್ಪತ್ರೆ ಮತ್ತು ಕಮಂಗಿಪುರ ಎಂದು ನನ್ನ ಆಯಾಯ ಲೇಖನದ ಪರಿಧಿಯಲ್ಲಿ ಮಾತ್ರ ಗಮನಿಸಿ ಸಮಾಧಾನಿಯಾಗಿ ಯೋಚಿಸಿದರೆ ಮಾಧುರಿಯ...ಅಲ್ಲಲ್ಲ ನನ್ನ ದಿಲ್ ಮಾತ್ರವಲ್ಲ ಅದರಲ್ಲಿನ ನಿಷ್ಠೆ, ಪ್ರಾಮಾಣಿಕತೆ, ಕಳಕಳಿ, ಪ್ರೀತಿ ಮತ್ತೆಲ್ಲವೂ ಕಾಣಿಸುತ್ತದೆ. ಅದು ಕಾಣದಿದ್ದರೆ ಚಿಂತಿಸಬೇಡಿ, ನಿಮ್ಮ ತಲೆಯಲ್ಲಿ ಚೋಲಿ, ಚುನರಿಗಳ ಮತ್ತು  ದಿಲ್ ನಡುವಿನ ಬೇರೇನೋ ಕಂಡರೆ ಅದು ನಿಮ್ಮ ತಪ್ಪಲ್ಲ. ಯುವಮಾನಸ್ಸುಗಳೇ ಹಾಗೆ. ಕಾಲ ದಿಲ್ ಅನ್ನು ಅಲ್ಲಿನ ಕಳಕಳಿಯನ್ನು ಸ್ಮೃತಿ ಪಟಲದ ಪರದೆಯ ಮೇಲೆ ತೋರಿಸುತ್ತದೆ. ಅಲ್ಲಿಯವರೆಗೆ ತಾಳ್ಮೆಯಿರಲಿ. ಏಕೆಂದರೆ ತಾಳಿದವನು ಬಾಳಿಯಾನು!

ಅದಲ್ಲದೆ ನನ್ನ ಕೆಲವು ಲೇಖನಗಳು ಟ್ಯಾಗ್ಲೈನ್ ಇಲ್ಲದೆಯೂ ಇವೆ. ಕೇವಲ ನನ್ನ ವಾಸದ ದೇಶವನ್ನು ಪರಿಗಣಿಸಿ ನಾನು ಪರದೇಶಗಳನ್ನು ಹೊಗಳುತ್ತಿದ್ದೇನೆ ಎಂದು ನಾನು ಬರೆಯದ ವಿಷಯಗಳನ್ನು ಏಕೆ ಊಹಿಸಿಕೊಳ್ಳುತ್ತೀರಿ? ಈ ಪೋಸ್ಟಿನ ಲೇಖನದ ಪರಿಧಿಯಲ್ಲಿ ಭಾರತ ಏಕೆ ಹುಚ್ಚಾಸ್ಪತ್ರೆಯಲ್ಲ ಎಂದು ತಿಳಿಸಿ, ವಿಡಂಬನೆ ಸಾಹಿತ್ಯದ ಒಂದು ಭಾಗ ಎಂದುಕೊಂಡು ಲೇಖನದ ಆಶಯವನ್ನು ಮಾತ್ರ ಗ್ರಹಿಸಿ, ನಮ್ಮ ವಾಸ್ತವದ ಹಿನ್ನೆಲೆಯಲ್ಲಿ ಲೇಖನವನ್ನು ಕಾಣಬೇಕೆ ಹೊರತು ಲೇಖಕನ ವಾಸದ ನೆಲೆಯ ಹಿನ್ನೆಲೆಯಲ್ಲಿ ಕಾಣಬಾರದು, ಸತ್ಯದ ಬುನಾದಿಯ ಮೇಲೆ ನನ್ನ ದೇಶವನ್ನು ಕಟ್ಟೋಣ/ನೋಡೋಣ ಎಂಬ ಆಶಯವೇ ನನ್ನ ಟ್ಯಾಗ್ಲೈನ್ ಹಿಂದಿನ ಕಳಕಳಿ, ಇತ್ಯಾದಿ ಇತ್ಯಾದಿಯಾಗಿ ನಾನು ಏನೇ ಬೊಮ್ಮಡಿ ಹೊಡೆದರೂ ಅದು ಚೋಲಿ, ಚುನರಿ ಮತ್ತು ದಿಲ್ ನಡುವಿನ ಕಲ್ಪನಾ ಭಾಗವಾಗಿಯೇ ಕಾಣುತ್ತದೆ.

ಇನ್ನು ಕೊರೋನಾ ಹಿನ್ನೆಲೆಯಲ್ಲಿ ನಮ್ಮಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿದೆ, ನಮ್ಮಲ್ಲಿ ಕೊರೋನಾ ಹೆಚ್ಚಿದ್ದರೆ ಇಷ್ಟರೊಳಗೆ ದೇಶದಾದ್ಯಂತ ಎಲ್ಲೆಲ್ಲೂ ಸಾವು ನೋವು ತುಂಬಿರಬೇಕಿತ್ತು, ಇತ್ಯಾದಿ ಇತ್ಯಾದಿ ಹುಸಿ ಧುರಭಿಮಾನದ ಭಾವನಾತ್ಮಕತೆಯನ್ನು ಬದಿಗಿಟ್ಟು ನೋಡಿದಾಗ ವಾಸ್ತವಿಕವಾಗಿ ಪ್ರಪಂಚದ ಇತರೆ ಭಾಗಗಳಲ್ಲಿ ದಶಕದ ಹಿಂದೆ ಬಂದು ಹೋದ ಚಿಕೂನ್ ಗುನ್ಯಾ, ಡೆಂಗ್ಯೂ, ಹಕ್ಕಿಜ್ವರ, ಹಂದಿಜ್ವರಗಳು ಭಾರತದಲ್ಲಿ ಭದ್ರವಾಗಿ ಇಂದಿಗೂ ತಳವೂರಿವೆ. ಭಾರತ ಮಧುಮೇಹಿಗಳ, ಹೃದ್ರೋಗಿಗಳ, ಅಜೀರ್ಣತೆಯ, ಅಪೌಷ್ಟಿಕತೆಯ ರಾಜಧಾನಿ ಎಂದು ಹೆಸರಾಗಿದೆ.

ಹಾಗಾಗಿ ವಾಸ್ತವದ ಹಿನ್ನೆಲೆಯಲ್ಲಿ ಲಾಕ್ ಡೌನ್ ಮಹತ್ವವನ್ನು ಅರಿತುಕೊಳ್ಳಿ. ಸರ್ಕಾರ ಫೋನುಗಳು ರಿಂಗ್ ಆಗುವ ಮುನ್ನ ಕೊಡುತ್ತಿದ್ದ ಎಚ್ಚರಿಕೆಯನ್ನು ಟ್ರೋಲ್ ಮಾಡಿದಂತೆ, ಚಪ್ಪಾಳೆ ಕರೆಯನ್ನು ವೈಪರೀತ್ಯಕ್ಕೆ ಕೊಂಡೊಯ್ದ ರೀತಿ ಮಾಡದೆ ಇಂದು ವಿಸ್ತರಿಸಿದ ಲಾಕ್ ಡೌನ್ ಅನ್ನು ಜವಾಬ್ದಾರಿಯಿಂದ ನಿರ್ವಹಿಸಿ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ.

ಚೋಲಿ ಕೆ ಪೀಚೆ, ಚುನರಿ ಕೆ ನೀಚೆ ಎಂದು ಈಗಲೂ ಕೇಳುವಿರಾದರೆ ನನ್ನ ಉತ್ತರ ಸದಾ "ನಾಯಕ್ ನಹೀ ಖಳ್ ನಾಯಕ್ ಹೂ ಮೇ!"

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ
#ಕರ್ನಾಟಕವೆಂಬೋಕಮಂಗಿಪುರದಲ್ಲಿ

No comments: