ವಾಪಸ್ಸಾಗುವ ಎನ್ನಾರೈಗಳು.

ವಿದೇಶಗಳಿಂದ ಭಾರತಕ್ಕೆ ಹಿಂದಿರುಗಿ ದೇಶಭಕ್ತಿಯ ಕುರಿತು ಶಂಖ ಜಾಗಟೆ ಬಾರಿಸುವ ಎನ್ನಾರೈಗಳ ಹಕೀಕತ್ ಏನು?


1. ವಿದೇಶದಲ್ಲಿದ್ದ ಇವರುಗಳು ತಮ್ಮ ಮಕ್ಕಳು ಅದರಲ್ಲೂ "ಹೆಣ್ಣು"ಮಕ್ಕಳು ವಿದೇಶದಲ್ಲಿ ಬೆಳೆದರೆ  ನಮ್ಮ "ಹಿಡಿತ"ದಲ್ಲಿ ಇರುವುದಿಲ್ಲ ಹಾಗಾಗಿ ನಮ್ಮ "ಸಂಸ್ಕೃತಿ"ಯಲ್ಲಿ ಬೆಳೆಸಬೇಕು ಎಂದು ತಮ್ಮ ಶಿಶುಪಾಲನೆ ಪೋಷಣೆಯ ಬಗ್ಗೆಯೇ ಅನುಮಾನವಿರುವ "ಅಸುರಕ್ಷಿತ"ರು. ಇವರುಗಳು ಮಕ್ಕಳಿರಲಿ ಮದುವೆಯಾಗಲು ಕೂಡ ಅನರ್ಹರು.

2. ಭಾರತದಿಂದ ವಲಸೆ ಹೋಗುವಾಗಲೇ ಅವರಿರುವ ಬಾವಿಯನ್ನು ಯಥಾವತ್ತಾಗಿ ಎತ್ತಿಕೊಂಡು ಹೋಗಿ ಅದೇ ಬಾವಿಯಲ್ಲಿ ವಾಸಿಸುವವರು. ಸಂಸ್ಕೃತಿ ಶ್ರೇಷ್ಠತೆ ಇವರ ವ್ಯಸನ. 

3. ತಾವು ವಿದೇಶದಲ್ಲಿ ಒಗ್ಗೂಡಿಸಿದ ಉಳಿತಾಯದ ಹಣವನ್ನು ಬೆಂಗಳೂರಿನಲ್ಲಿ ಹೂಡಿ ಇಂದಿನ ಕೋರೋನದಂತೆಯೇ ಅಂದು ಏರಿದ್ದ ರಿಯಲ್ ಎಸ್ಟೇಟಿನ ಕೃಪೆಯಿಂದ ಅದನ್ನನುಭವಿಸಲು ಬೆಂಗಳೂರಿಗೆ ವಾಪಸ್ ಬಂದವರು. ಆ ಆರ್ಥಿಕ ಸತ್ಯವನ್ನು ಮರೆಮಾಚಿ "ನಮ್ಮೂರೇ ಅಂದ, ನಮ್ಮವರೇ ಚೆಂದ" ಎಂದು ಹುಸಿ ದೇಶಭಕ್ತಿ ಮೆರೆಯುವವರು. 

4. ಒಂದು, ಎರಡು ಮತ್ತು ಮೂರರಲ್ಲಿರುವವರು ವಿದೇಶಿ ಪೌರತ್ವ ಪಡೆದವರಿದ್ದರೆ, ಅವರ ಮಕ್ಕಳು ಬೆಳೆದ ಮೇಲೆ ವಿದೇಶಕ್ಕೆ ಹಾರಿಹೋಗುತ್ತಾರೆಯೇ ಹೊರತು ತಾಯ್ನಾಡಿನಲ್ಲಿ ಆತ್ಮನಿರ್ಭರಿಸುವುದಿಲ್ಲ. ಆಗ ಅವರು ಕೊಡುವ ಕಾರಣ ಬೆಂಗಳೂರು ಪೊಲ್ಯೂಷನ್ ಜಾಸ್ತಿ, ಆಸ್ತಮಾ ಬರುತ್ತದೆ.

5. ರಾಜಕೀಯ ಮಹತ್ವಾಕಾಂಕ್ಷೆಗೆ ಬರುವವರು. ಇವರು ವಿದೇಶಿ ಪೌರತ್ವ ಪಡೆಯದೆ ವಾಪಸ್ ಬರುತ್ತಾರೆ. ಉದಾಹರಣೆಗೆ ಸುಬ್ರಮಣಿಯನ್ ಸ್ವಾಮಿ, ಎಸ್.ಎಂ.ಕೃಷ್ಣ, ಸ್ಯಾಮ್ ಪಿತ್ರೋಡ, ಖೇಣಿ ಮುಂತಾದವರು.


ಈ ಐದು ವರ್ಗಗಳಲ್ಲಿ ಐದನೇ ವರ್ಗವನ್ನು ನಂಬಲರ್ಹ ಎನ್ನಾರೈಗಳೆನ್ನಬಹುದು. 


ಇದಲ್ಲದೆ ಇನ್ನೊಂದು ವರ್ಗವಿದೆ. 


6. ತಾಯ್ನೆಲ ಬಿಟ್ಟದ್ದಕ್ಕೆ ಪ್ರಾಯಶ್ಚಿತ್ತವಾಗಿ ಮಳೆ ಬೀಳದ ಬರಡು ಪ್ರದೇಶಗಳಲ್ಲಿ ಭೂಮಿ ಖರೀದಿಸಿ °ಬೇಸಾಯ, ನೀ ಸಾಯ, ನಿನ್ನ ಮನೆಮಂದಿ ಸಾಯ" ಎಂದು ತಾಯ್ನೆಲದ ಮಣ್ಣಿಗೆ ತಮ್ಮ ದುಡಿಮೆಯ ಉಳಿತಾಯವನ್ನು ಸವೆಸುವವರು, ಅಥವಾ ಸಾಮಾಜಿಕ ಅರಣ್ಯ ಬೆಳೆಸಿ ಪರಿಸರ ಕಾಪಾಡುತ್ತಿರುವವರು. ಇನ್ನು ಕೆಲವರು ತಮ್ಮ ಭಾರತ ಭೇಟಿಯಲ್ಲಿ ಕೈಲಾದ ದಾನಧರ್ಮ ಮಾಡಿ ಹೋಗುವವರು.


ಈ ಆರನೇ ವರ್ಗವೇ ಹುಚ್ಚರು ಮತ್ತು ಕಮಂಗಿಗಳು. ಐದನೇ ವರ್ಗವನ್ನು ಬಿಟ್ಟು ಉಳಿದವರು ಆತ್ಮವಿಲ್ಲದನಿರ್ಭರರು!


ಹಲವು ಕಾಲ ಹಂಸೆಯ ಸಂಗದಲ್ಲಿದ್ದರೇನು, ಬಕ ಶುಚಿಯಾಗಬಲ್ಲುದೇ? ಗಂಗಾನದಿಯಲ್ಲಿದ್ದರೇನು, ಪಾಷಾಣ ಮೃದುವಾಗಬಲ್ಲುದೇ? ಕಲ್ಪತರುವಿನ ಸನ್ನಿಧಿಯಲ್ಲಿದ್ದರೇನು, ಒಣ ಕೊರಡು ಕೊನರಿ ಫಲವಾಗಬಲ್ಲುದೇ? ಕಾಶೀಕ್ಷೇತ್ರದಲ್ಲಿ ಒಂದು ಶುನಕವಿದ್ದರೇನು, ಅದರ ಹಾಲು ಪಂಚಾಮೃತಕ್ಕೆ ಸಲುವುದೇ? ತೀರ್ಥದಲೊಂದು ಗಾರ್ದಭನಿದ್ದರೇನು, ಕಾರಣಿಕನಾಗಬಲ್ಲುದೇ? ಖಂಡುಗ ಹಾಲೊಳಗೊಂದು ಇದ್ದಲಿಯಿದ್ದರೇನು, ಬಿಳುಹಾಗಬಲ್ಲುದೇ? ಇದ ಕಾರಣ ಕೂಡಲಸಂಗನ ಶರಣರ ಸನ್ನಿಧಿಯಲ್ಲಿ ಅಸಜ್ಜನನಿದ್ದರೇನು, ಸದ್ಭಕ್ತನಾಗಬಲ್ಲನೇ?’


ಆತ್ಮ ನಿರಾಭಾರವಾಯಿತು.


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

No comments: