ಮುರಳಿ ಕೃಷ್ಣ ಮದ್ದಿಕೇರಿ ಭೇಟಿ

 ಧನ್ಯವಾದ Ravi Hanj 

ಅಭಿನಂದನೆಗಳು 💐💐


ಇಂದು ಚಿತ್ರದುರ್ಗದಲ್ಲಿ ನಿಮ್ಮನ್ನು ಭೇಟಿ ಆಗ್ತೀನಿ ಅಂತ ನಿರೀಕ್ಷಿಸಿರಲಿಲ್ಲ. ನೂತನ ಸಂವತ್ಸರದ ಪ್ರಥಮ ಅಚ್ಚರಿ ಇಂದು ನಿಮ್ಮೊಂದಿಗೆ ನಾನು ಕಳೆದ ಕೆಲವು ಗಂಟೆಗಳ ಕಾಲಾವಧಿ.‌ 

+ಇತ್ತೀಚೆಗೆ ಮೈಸೂರಿನಲ್ಲಿ ಲೋಕಾರ್ಪಣೆಯಾದ ನಿಮ್ಮ ನೂತನ ಕಾದಂಬರಿ 'ಅರಿದೊಡೆ ಆರದು ಮರೆದೊಡೆ ಮೂರದು' ನನ್ನ ಕೈ ಸೇರಿದ್ದು. 


ದಾವಣಗೆರೆಯ ಸ್ನೇಹಿತರಾದ ರವಿಶಂಕರ ಹಂಜಗಿಮಠ ಅನಿವಾಸಿ ಭಾರತೀಯ. ‌ಶಿಕ್ಯಾಗೋ ಮಹಾನಗರ ನಿವಾಸಿ.‌


ನಾನು ಅತ್ಯಂತ ಇಷ್ಟಪಡುವ ವ್ಯಕ್ತಿಗಳಲ್ಲಿ ಒಬ್ಬರು. 


ರವಿ ಅವರ ಪರಿಚಯ ಫೇಸ್‌ಬುಕ್‌ ಮೂಲಕವೇ. ಯಾವುದೇ ಪಂಥದೊಡನೆ ಗುರುತಿಸಿಕೊಳ್ಳದ ರಸಿಕ ಮಿತ್ರ ರವಿಯವರು ಮಹಾ ಧೈರ್ಯಶಾಲಿ. ಅವರು ಯಾವಾಗ ಯಾರನ್ನು ಹೊಗಳುತ್ತಾರೋ, ಟೀಕಿಸುತ್ತಾರೋ ನಿರೀಕ್ಷಿಸಲಾಗದು. ಕ್ಷಣಕ್ಕೊಂದು ಅಚ್ಚರಿ ನೀಡಬಲ್ಲ ವಿಶೇಷ ವ್ಯಕ್ತಿ. 


ರವಿಯವರ ಪರಿಚಯ ಅವರ ಪ್ರಥಮ ಕೃತಿ, ಚೀನಾದ ಬೌದ್ಧ ಯಾತ್ರಿಕ ಹ್ಯುಯೆನ್ ತ್ಸಾಂಗ್ ಜೀವನಾಧರಿತ 'ಮಹಾ ಪಯಣ' ಕೃತಿಯಿಂದ‌. ಆ ಕೃತಿ ಸಮಸ್ತ ಭಾರತೀಯ ಭಾಷೆಗಳಲ್ಲಿ ಹ್ಯುಯೆನ್ ತ್ಸಾಂಗ್ ಕುರಿತು ಪ್ರಕಟವಾಗದ ಮಾಹಿತಿಗಳ ರೋಚಕ ಕಥಾನಕವೇ ಆಗಿತ್ತು. 


ಆ ಸಂದರ್ಭದಲ್ಲಿ ಪರಸ್ಪರ ಹಂಪಿಯಲ್ಲಿ ಭೇಟಿಯಾದೆವು. ಇಬ್ಬರದೂ ಅಲೆದಾಟದ ಅನ್ವೇಷಕ ಮನಸ್ಸು. ಸಮಾನ ಮನಸ್ಕರೊಡನೆ ಸ್ನೇಹ ದಿನದಿಂದ ದಿನಕ್ಕೆ ಗಾಢವಾಗುತ್ತಾ ಸಾಗುತ್ತದೆ. ಪರಿಚಯ ನಮ್ಮಿಬ್ಬರನ್ನು ಆತ್ಮೀಯ ಮಿತ್ರರನ್ನಾಗಿಸಿದೆ.‌ 


ಕೋವಿಡ್‌ಗಿಂತ ಮುಂಚೆ ರವಿ ಭಾರತಕ್ಕೆ ಬಂದಾಗಲೆಲ್ಲಾ ಕರ್ನಾಟಕದ ವಿವಿಧೆಡೆ‌ ಅಲೆದೆವು. ಕರ್ನಾಟಕದ ವಿವಿಧೆಡೆ ಅವರ ಮಿತ್ರರ ದೊಡ್ಡ ದಂಡೇ ಇದೆ. ಹೋದಲ್ಲೆಲ್ಲಾ ಹೊಸ ಸ್ನೇಹಿತರ ಪರಿಚಯ, ಹರಟೆ, ಮಾತುಕತೆ.. ಹೋದಲ್ಲೆಲ್ಲಾ ಸಂಭ್ರಮ. ಸಂಜೆಯ ಪಾನಗೋಷ್ಠಿಗಳಂತೂ ವರ್ಣ ರಂಜಿತ. ಪಾನ ಗೋಷ್ಠಿಗಳಲ್ಲಿ ಅನೇಕ ರೀತಿಯ ವಿಷಯಗಳ ಚರ್ಚೆ. ಅವುಗಳಲ್ಲಿ ರೋಚಕತೆ, ರಸಿಕತೆ, ಮನುಷ್ಯನ ಸದ್ಗುಣ, ನೀಚತನಗಳು, ರಾಜಕೀಯ, ಸಾಹಿತ್ಯ ಇವುಗಳ ಬಗ್ಗೆ ವ್ಯಾಪಕ ಚರ್ಚೆ ಆಗುತ್ತಿತ್ತು. 


ರವಿ ಇದುವರೆಗೆ ಕನ್ನಡದಲ್ಲಿ ಐದು ಕೃತಿಗಳನ್ನು, ಇಂಗ್ಲೀಷ್‌ನಲ್ಲಿ ಎರಡು ಕೃತಿಗಳನ್ನು ರಚಿಸಿದ್ದಾರೆ. ಪ್ರತಿ ಬಾರಿ ಭಾರತ ಭೇಟಿಗೆ ಬರುವಾಗ ಒಂದು ಹೊಸ ಪುಸ್ತಕದೊಡನೆ ಬರುತ್ತಾರೆ. ನನ್ನಂಥ ಮಿತ್ರರ ಸಂಭ್ರಮ‌ ಹೆಚ್ಚಿಸುತ್ತಾರೆ. 


ಕೋವಿಡ್ ಪೂರ್ವದಲ್ಲಿ ನಾವು ಪರಸ್ಪರ ಭೇಟಿಯಾಗಿದ್ದು ಇದು ಎರಡನೇ ಸಲ. ಅವರ ನೂತನ ಕೃತಿ ವಿವಾದಾಸ್ಪದ ವಿಷಯವನ್ನು ಒಳಗೊಂಡಿದ್ದು ಸಾಕಷ್ಟು ಕುತೂಹಲ‌ ಕೆರಳಿಸುವ ವಿಷಯ ವಸ್ತು ಹೊಂದಿದೆ. 


ರವಿ ಫೇಸ್‌ಬುಕ್‌ ಸಾಮಾಜಿಕ ಜಾಲತಾಣದಲ್ಲಿ #ಭಾರತವೆಂಬೋ_ಹುಚ್ಚಾಸ್ಪತ್ರೆಯಲ್ಲಿ #ಕರ್ನಾಟಕವೆಂಬೋ_ಕಮಂಗಿಪುರದಲ್ಲಿ ಟ್ಯಾಗ್ ಲೈನ್‌ನಲ್ಲಿ ವರ್ತಮಾನದ ಬೆಳವಣಿಗೆಗಳಿಗೆ ಮುಖಾಮುಖಿ ಆಗ್ತಾರೆ. ಸಾಗರದಾಚೆಯ ನಾಡಿನಿಂದ ತಾಯ್ನೆಲದ ವಿಷಯ, ಬೆಲಕವಣಿಗೆಗಳಿಗೆ ಸ್ಪಂದಿಸುತ್ತಾರೆ. 


ಕಳೆದೆರಡು ದಶಕಗಳಿಂದ ಅಮೆರಿಕಾ ದೇಶದ ನಾಗರಿಕರಾಗಿದ್ದರೂ ದಾವಣಗೆರೆಯ ನೆಲದ ಸೊಗಡು ಅವರನ್ನು ಬಿಟ್ಟಿಲ್ಲ. ರವಿ ಯಾವುದೇ ಹಮ್ಮು ಬಿಮ್ಮುಗಳಿಲ್ಲದೇ ರಸ್ತೆ ಪಕ್ಕದ ಹೋಟೆಲ್‌ನಲ್ಲಿ ಮಂಡಕ್ಕಿ, ಮಿರ್ಚಿ ಸವಿಯಬಲ್ಲರು. ಜನ ಸಾಮಾನ್ಯರೊಡನೆ ಬೆರೆಯಬಲ್ಲರು. ಅದೇ ವೇಳೆ ಅವರ ವ್ಯಕ್ತಿತ್ವದ ಪಂಚತಾರಾ ಆಯಾಮವನ್ನು ನೋಡಬಹುದು. 


ಅವರ ಸ್ನೇಹ ವಲಯದಲ್ಲಿ ರಾಜಕಾರಣಿಗಳು, ಶಾಸಕರು, ಸಚಿವರು, ಉನ್ನತಾಧಿಕಾರಿಗಳು, ವಕೀಲರು, ವೈದ್ಯರು, ವಿವಿಧ ಕ್ಷೇತ್ರಗಳ ಸಾಧಕರು, ಸಾಹಿತಿಗಳು, ಸಂಶೋಧಕರು, ಉಪನ್ಯಾಸಕರು ಹೀಗೆ ತರಹಾವರಿ ಜನರಿದ್ದಾರೆ. ಇದು ಅವರ ಸ್ನೇಹಮಯಿ ವ್ಯಕ್ತಿತ್ವವನ್ನು ತೋರಿಸುತ್ತದೆ. 


ಈ ವರ್ಷ ಅನಿವಾರ್ಯ ಕಾರಣಗಳಿಂದಾಗಿ ರವಿಯವರ ಪುಸ್ತಕ ಬಿಡುಗಡೆ ಕಾರ್ಯಕ್ರಮ ಹಾಗೂ ಅವರೊಡನೆ ಸುತ್ತಾಟ ಮಿಸ್ ಮಾಡಿಕೊಂಡಿದ್ದೆ. ಆ ಕೊರತೆಯನ್ನು ಇಂದಿನ ಭೇಟಿ ತುಂಬಿತು. ಚಿತ್ರದುರ್ಗದಲ್ಲಿ ಅವರ ಸ್ನೇಹಿತರ ಬಳಗದೊಂದಿಗೆ ಒಂದಿಷ್ಟು ಕಾಲ ಹರಟಿ ನನ್ನ ಸಹೋದರಿಯ ಮನೆಯಲ್ಲಿ ಭೋಜನ ಮಾಡಿ ಪರಸ್ಪರ ಬೀಳ್ಕೊಂಡೆವು. 


ಮುಂದಿನ ವಾರ ರವಿ ತಮ್ಮ ಸ್ವಸ್ಥಾನಕ್ಕೆ ಮರಳಲಿದ್ದಾರೆ.‌ ಆದರೆ, ಫೋನ್, ಫೇಸ್‌ಬುಕ್‌, ವಾಟ್ಸ್‌ಆ್ಯಪ್, ಮೆಸೆಂಜರ್ ಮೂಲಕ ನಿರಂತರ ಸಂಪರ್ಕ ಇದ್ದರೂ ವೈಯಕ್ತಿಕ ಭೇಟಿಯಷ್ಟು ಸೊಗಸು ಈ ಯಾಂತ್ರಿಕ ಸಂಪರ್ಕಗಳಲ್ಲಿ ಇರೋದಿಲ್ಲ. 


ಸದಾ ಹೊಸತನ್ನು ಹುಡುಕುವ ಅನ್ವೇಷಕ ಮನಸ್ಸಿನ ರವಿಯವರಿಗೆ ಶುಭವಾಗಲಿ. ಆದಷ್ಟು ಬೇಗ ಒಂದು ಸುದೀರ್ಘ ಕಾಲದ ಬಿಡುವಿನೊಡನೆ ಭಾರತಕ್ಕೆ ಭೇಟಿ ನೀಡಲಿ ಎಂದು ಹಾರೈಸುವೆ. 


#ಅಲೆಮಾರಿಯ_ಪ್ರವಾಸ_ಕಥನಗಳು

No comments: