ಬಿಟ್ಟಿ ಮತ್ತು ಗಟ್ಟಿ ಭಾಗ್ಯಗಳು

 ಯಾವ ಭಾಗ್ಯವು ಒಂದು ನಿರ್ದಿಷ್ಟ ಗುರಿಯಿಲ್ಲದೆ ದುರ್ಬಲರನ್ನು ದುರ್ಬಲವಾಗಿಯೇ ಇರಲು ಬಿಟ್ಟು ಅನಿರ್ದಿಷ್ಟ ಕಾಲಾವಧಿಯವರೆಗೆ ಅಥವಾ ಹಣ ಖರ್ಚಾಗುವವರೆಗೆ ಇರುವುದೋ ಅದು ಬಿಟ್ಟಿ ಭಾಗ್ಯ. ಯಾವ ಭಾಗ್ಯವು ಒಂದು ನಿರ್ದಿಷ್ಟ ಗುರಿಯೊಂದಿಗೆ ಗುರಿ ಸಾಧಿಸಿದ ನಂತರ ಇಲ್ಲವಾಗುವುದೋ ಅದು ಗಟ್ಟಿ ಭಾಗ್ಯ.


ಬಡತನದ ರೇಖೆಯ ಕೆಳಗಿರುವ ಒಂದು ಕುಟುಂಬಕ್ಕೆ ಉಚಿತ ಆಹಾರಧಾನ್ಯಗಳನ್ನು ಸರ್ಕಾರವು ಒಂದು ನಿರ್ದಿಷ್ಟ ಅವಧಿಗೆ ಒದಗಿಸಿ ಆ ಕುಟುಂಬವನ್ನು ಅದೇ ನಿರ್ದಿಷ್ಟ ಅವಧಿಯ ಒಳಗೆ ಬಡತನದ ರೇಖೆಯಿಂದ ಮೇಲೆತ್ತುವ ಯೋಜನೆಯನ್ನು ಹಾಕಿರಬೇಕು. ಉದಾಹರಣೆಗೆ ಆರು ತಿಂಗಳ ಕಾಲ ಒಂದು ಕುಟುಂಬಕ್ಕೆ ಉಚಿತ ಆಹಾರಧಾನ್ಯ ಒದಗಿಸಿ ಆ ಕುಟುಂಬದ ವಯಸ್ಕ ಸದಸ್ಯರಿಗೆ ಉದ್ಯೋಗ ತರಬೇತಿ, ಕೌಶಲ್ಯ ಅಭಿವೃದ್ಧಿ ತರಬೇತಿ, ಮತ್ತು ತಮ್ಮದೇ ಘನ ಸರ್ಕಾರದ ಉದ್ಯೋಗ ವಿನಿಮಯ ಕೇಂದ್ರದ ಮೂಲಕ ಉದ್ಯೋಗ ಒದಗಿಸುವ ಎಲ್ಲಾ ಪ್ರಾಮಾಣಿಕ ಪ್ರಯತ್ನವನ್ನು ಮಾಡುವ ಯೋಜನೆಗಳನ್ನು ತಳುಕುಹಾಕಿ ಆ ಕುಟುಂಬವು ತಮ್ಮ ಅನ್ನವನ್ನು ತಾವೇ ಆ ನಿರ್ದಿಷ್ಟ ಅವಧಿಯ ಒಳಗೆ ಗಳಿಸಿಕೊಳ್ಳಲು ಉತ್ತೇಜಿಸಬೇಕು. ಆರು ತಿಂಗಳ ಕಾಲ ಆ ಕುಟುಂಬದ ವಯಸ್ಕ ವ್ಯಕ್ತಿಗಳು ಯಾವ ಉದ್ಯೋಗಕ್ಕೆ ಅರ್ಜಿ ಹಾಕಿದ್ದರು, ಅಥವಾ ಪ್ರಯತ್ನಿಸಿದ್ದರು ಎಂಬ ಸರಳ ದಾಖಲಾತಿಯನ್ನು ಉದ್ಯೋಗ ವಿನಿಮಯ ಕೇಂದ್ರಗಳ ಮೂಲಕ ದಾಖಲಿಸಬೇಕು. ಈ ಪ್ರಕ್ರಿಯೆಯಿಂದ ಆ ಕುಟುಂಬದ ಸದಸ್ಯರಿಗೆ ಒಂದು ನೈತಿಕ ಜವಾಬ್ದಾರಿಯನ್ನು ಹೇರಿದಂತಲೂ ಆಗುತ್ತದೆ. ಒಂದು ವೇಳೆ ಆ ನಿರ್ಧರಿತ ಆರು ತಿಂಗಳಲ್ಲಿ ಗುರಿ ತಲುಪದಿದ್ದರೆ ಮತ್ತೊಂದು ಅವಧಿಗೆ ವಿಸ್ತರಿಸಿ ಕಡೆಗೆ ಒಂದೆರಡು ಅವಧಿಗೆ ನಿಲ್ಲಿಸಬೇಕು. ಹಾಗೆ ಮಾಡಿದಾಗ ಸೋಮಾರಿಗಳು ಎಚ್ಚೆತ್ತುಕೊಂಡು ತಮ್ಮ ಅನ್ನ ಗಳಿಸುವ ಮಾರ್ಗೋಪಾಯಗಳನ್ನು ಕಂಡುಕೊಳ್ಳುತ್ತಾರೆ.


ಒಟ್ಟಾರೆ ಆದಷ್ಟು ಬೇಗ ಆ ಕುಟುಂಬವು ಬಡತನದ ರೇಖೆಯಿಂದ ಮೇಲಕ್ಕೇರಿಸುವ ಸಮಗ್ರ ಯೋಜನೆಯನ್ನು ಹಾಕಿಕೊಂಡಾಗ ಅದು ಸದೃಢ ನಾಗರಿಕ ಮತ್ತು ದೇಶವನ್ನು ಅಭಿವೃದ್ಧಿಶೀಲತೆಯ ಕಡೆ ನಡೆಸಿ ಗಟ್ಟಿ ಭಾಗ್ಯ ಎನಿಸುವುದಲ್ಲದೆ ಸರ್ಕಾರ ತನ್ನ ಜನರ ಆರ್ಥಿಕ ಅಭಿವೃದ್ದಿಯೊಂದಿಗೆ ದೇಶದ ಆರ್ಥಿಕ ಉನ್ನತಿಗೆ ಶ್ರಮಿಸಿದ ಹಾಗಾಗುತ್ತದೆ. ಹಾಗೆಯೇ ಆ ಯೋಜನೆಯ ಪರಿಣಾಮವನ್ನು ಸಮರ್ಥವಾಗಿ ಅಳೆಯಲು ಅಳತೆಗೋಲು, ಮಾಪನಾಂಶ, ಯಶಸ್ಸಿನ ಸೂತ್ರ ಒಂದು ವೈಜ್ಞಾನಿಕ ತಳಹದಿಯಲ್ಲಿ ರೂಪುಗೊಳ್ಳುತ್ತವೆ, ಸಹ.


ಆದರೆ ಇಂತಹ ದೂರಾಲೋಚನೆ ಮತ್ತು ಸಮಗ್ರ ಚಿಂತನೆ ಇರದ ಕಾರಣ ಸದ್ಯದ ಭಾಗ್ಯಗಳು ಬಿಟ್ಟಿ ಭಾಗ್ಯ ಎನಿಸಿಬಿಡುತ್ತವೆ. ಇಂತಹ ಚಿಂತನೆ ಹತ್ತು ವರ್ಷಗಳ ಹಿಂದೆ ಭಾಗ್ಯಗಳನ್ನು ಘೋಷಿಸುವಾಗಲೂ ಇರಲಿಲ್ಲ, ಈಗಲೂ ಇಲ್ಲ. ನಡುವೆ ಬಂದುಹೋದ ಸಮ್ಮಿಶ್ರ, ಪಕ್ಷಾಂತರಿ, ಕುಲಾಂತರಿ ಧಾರ್ಮಿಕ ಸರ್ಕಾರಕ್ಕೂ ಇರಲಿಲ್ಲ.  


ಇಂತಹದ್ದನ್ನು ತಿಳಿಸಬೇಕಾದ ಆರ್ಥಿಕ ತಜ್ಞರು, ಸುಶಿಕ್ಷಿತರು, ಬುದ್ಧಿಜೀವಿಗಳು, ಚಿಂತಕರು, ಪತ್ರಕರ್ತರು, ಟಾಮ್, ಡಿಕ್ ಮತ್ತು ಹ್ಯಾರಿ ಮತ್ತು ಮೇರಿಗಳು ತಮ್ಮ ತಮ್ಮ ಪಂಥೀಯ ಸಿದ್ಧಾಂತದ ಅನುಕೂಲಕ್ಕೆ ತಕ್ಕಂತೆ, "ಆಹಾ, ಇದು ಹಸಿದವರ ಸಂತೈಸುವ ಅನನ್ಯ ಯೋಜನೆ" ಎಂದು ಭಾವುಕ ಭ್ರಾಮಕ ಕತೆಯನ್ನು ಕನ್ನಡ ಧಾರಾವಾಹಿಗಳ ರೀತಿ ಧರಾಶಾಹಿಯಾಗಿ ಕಣ್ಣೀರು ಹರಿಸುತ್ತಾರೆ. ಆಚೆಯ ಬದಿಯವರು ಇದು ಸೋಮಾರಿಗಳನ್ನು ಸೃಷ್ಟಿಸುವ ಯೋಜನೆ, ನನ್ನ ತೆರಿಗೆ ಹಣ ಇದಕ್ಕೆ ಪೋಲಾಗಬಾರದು ಎಂದು ಉಗ್ರ ಪ್ರತಾಪ ತೋರುತ್ತಾರೆ.


ಮಧ್ಯೆ ಏನಾದರೂ ಇಂತಹ ಕಳಕಳಿಯ ಸಲಹೆ ನೀಡಿದ ನಮ್ಮಂತಹವರನ್ನು ಅವರರರ ಪಂಥಕೂಪದ ನಿಯಮದಂತೆ......... ಹರಹರಾ ಶ್ರೀ ಚೆನ್ನಸೋಮೇಶ್ವರ!


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

No comments: