"ಕಡಲಾಚೆಯ ಕನ್ನಡಿಗ" ಬಿರುದಾವಳಿ

 ಕೆಲವು ವರ್ಷಗಳ ಹಿಂದೆ ಮೈಸೂರಿನ ಜಿಲ್ಲಾ ಸಾಹಿತ್ಯ ಭವನದಲ್ಲಿ ಒಂದು ಪುಸ್ತಕ ಬಿಡುಗಡೆ ಸಮಾರಂಭಕ್ಕೆ ನನ್ನ ಪ್ರಕಾಶಕರೊಂದಿಗೆ ಹೋಗಿದ್ದೆ. ಅಂದು ಅತಿಥಿಯಾಗಿ ಬರಬೇಕಿದ್ದ ಶಾಸಕರೊಬ್ಬರು ಕೈ ಕೊಟ್ಟ ಕಾರಣ ನನ್ನನ್ನೇ ಅತಿಥಿಯಾಗಿ ಕೂರಿಸಿದರು. ಇತಿಹಾಸ ಕುರಿತಾದ ಪುಸ್ತಕ ಅದಾದ್ದರಿಂದ ಕೊಂಚ ಉತ್ಸಾಹದಿಂದಲೇ ಮಾತನಾಡಿದೆ. 


ಸಮಾರಂಭ ಮುಗಿದ ನಂತರ ಸಭಿಕರೊಂದಿಗೆ ಮಾತನಾಡುತ್ತಿರುವಾಗ ನೀಲಿ ಶಾಲು ಹೊದ್ದ ಒಬ್ಬರು ನನ್ನ ಬಳಿಗೆ ಬಂದರು. ಅವರ ಕೈಯಲ್ಲಿ ನನ್ನ "ಭಾರತ ಒಂದು ಮರುಶೋಧನೆ" ಪುಸ್ತಕವಿತ್ತು. "ಇದನ್ನು ಚೆನ್ನಾಗಿ ಬರೆದಿದ್ದೀರಿ. ನಿಮಗೆ "ಕಡಲಾಚೆಯ ಕನ್ನಡಿಗ" ಎಂಬ ಬಿರುದು ಕೊಟ್ಟು ಸನ್ಮಾನ ಮಾಡುತ್ತೇವೆ. ಇನ್ನು ಎಷ್ಟು ದಿನ ಮೈಸೂರಿನಲ್ಲಿರುವಿರಿ?" ಎಂದರು.


ಅದಕ್ಕೆ ನಾನು, "ಅಯ್ಯೋ ಅದೆಲ್ಲಾ ಏನೂ ಬೇಡ ಇವರೇ. ನಾನೊಬ್ಬ ಸಾಮಾನ್ಯ ಅಷ್ಟೇ. ನಾನು ಇನ್ನೊಂದು ವಾರ ಅಷ್ಟೇ ಇರುವುದು. ನಾನು ಮೈಸೂರಿನಲ್ಲಿ ಇರುವುದಿಲ್ಲ" ಎಂದೆ.


ಆಗ ಅವರು, "ಇಲ್ಲಿಲ್ಲ, ಅಷ್ಟರೊಳಗೆ ಸಮಾರಂಭ ಏರ್ಪಡಿಸುತ್ತೇವೆ. ನಿಮ್ಮ ನಂಬರ್ ಕೊಡಿ" ಎಂದು ನನ್ನ ನಂಬರ್ ತೆಗೆದುಕೊಂಡರು.


ನಾನು, "ಅರೆ, ಇವರು ಪರವಾಗಿಲ್ಲ. ಒಳ್ಳೆಯ ಉದಾರವಾದಿಗಳು. ನೆನ್ನೆ ಸಂಜೆ ನನ್ನ ಮರುಶೋಧನೆಯನ್ನು ಜೀರ್ಣಿಸಿಕೊಳ್ಳದೆ ಹಣಿಯಲು ನೋಡಿ ಸೋತಿದ್ದ ಕೃತ್ರಿಮ ಉದಾರವಾದಿಗಳ ನಡುವೆ ನಿಜದ ಉದಾರವಾದಿಗಳು ಮರುದಿನವೇ ಸಿಕ್ಕರಲ್ಲ" ಎಂದು ಖುಷಿಪಟ್ಟಿದ್ದೆ. 


ನಾನು ವಿಮಾನ ಹತ್ತುವ ಎರಡು ದಿನದ ಮುಂಚೆ ಆ ನೈಜ ಉದಾರವಾದಿ ನೀಲಿ ಶಾಲಿಗರು ಫೋನ್ ಮಾಡಿದರು, "ಸರ್, ನಮಗೆ "ಅಂಬೇಡ್ಕರ್ ಪುರಸ್ಕಾರ" ಸಿಕ್ಕಿದೆ. ಅದಕ್ಕೆ ನಮ್ಮ ಸಂಘದ ವತಿಯಿಂದ ಹತ್ತು ಜನ ದೆಹಲಿಗೆ ಹೋಗಬೇಕು. ನಿಮಗೆ ಸನ್ಮಾನ ಇಟ್ಟುಕೊಳ್ಳುತ್ತೇವೆ ಎಂದಿದ್ದೆನಲ್ಲ. ಪ್ರತಿಯಾಗಿ ನೀವು ನಾವು ಹತ್ತು ಜನಕ್ಕೆ ಬೆಂಗಳೂರಿನಿಂದ ದೆಹಲಿಗೆ ಒನ್ ವೇ ವಿಮಾನದ ವೆಚ್ಚ ಕೊಡಿ. ಬರುವಾಗ ರೈಲಿನಲ್ಲಿ ಬರುತ್ತೇವೆ. ನಮ್ಮ ಟ್ರಾವೆಲ್ ಏಜೆಂಟನ ಅಕೌಂಟ್ ನಂಬರ್ ಕಳಿಸುತ್ತೇನೆ" ಎಂದರು.


ಹೀಗೆ ಉದಾರ ಉದರವಾಯಿತು!


ನಾನು, "ನೋಡಿ, ಭಾರತದ ಯಾವುದೇ ಬ್ಯಾಂಕಿನಲ್ಲಿ ನನ್ನ ಖಾತೆ ಇಲ್ಲ. ಅದಕ್ಕೆ ನಾನು ಕಡಲಾಚೆ ಹೋಗಿಯೇ ಹಾಕಬೇಕು. ಮೇಲಾಗಿ ಘನ ಸಂವಿಧಾನವೆತ್ತ ಪ್ರಜಾಪ್ರಭುತ್ವ ಭಾರತ ಒಕ್ಕೂಟವೇ ನನಗೆ "ಸಾಗರೋತ್ತರ ಭಾರತೀಯ" ಎಂಬ ಬಿರುದು ಬಿನ್ನಾವಳಿಯನ್ನು ಕೊಟ್ಟಿದೆ. ಹಾಗಾಗಿ ಕಡಲಾಚೆಗೆ ಬೇರೆ ಕನ್ನಡಿಗರನ್ನು ವಿಚಾರಿಸಿ" ಎಂದು ಫೋನ್ ಇಟ್ಟೆ.


ಈಗ ಮೊನ್ನೆಯಷ್ಟೇ ಅರ್ಜಿ ಹಾಕಿ ಮರ್ಜಿ ಹಿಡಿದು ಪ್ರಶಸ್ತಿಗೆ ಗೋಗರೆಯುವ ತೆವಲಿನ ಲೇಖಕ/ಕಿ/?/ಯರ ಕುರಿತು ಪೋಸ್ಟ್ ಬರೆದಿದ್ದೆನಷ್ಟೆ. ಇಂದು ಅದೇ ಮರ್ಜಿ ಹಿಡಿಯುವ ಚಾಳಿ ಎಲ್ಲೆಲ್ಲಿಗೆ ತೇಲಿ ಹೋಗುತ್ತದೆ ಎಂದು ಪತ್ರಿಕೆಯೊಂದರ ಗಾಳಿಸುದ್ದಿಯ ಮೂಲಕ ಗೊತ್ತಾಯಿತು.


ಘೋಸ್ಟ್/ಹೋಸ್ಟ್/ಟೋಸ್ಟ್ ಬರಹಗಾರರು ಅಧಿಕಾರಸ್ಥರ ಹೆಂಡಂದಿರಿಗೆ ಕವನ ಸಂಕಲನ ಬರೆದುಕೊಡುವ ಬಗ್ಗೆ, ರಾಜಕಾರಣಿಗಳಿಗೆ ಆತ್ಮಕಥೆ, ದರ್ಶನ, ಇತ್ಯಾದಿ ಬರೆದುಕೊಡುವ ಬಗ್ಗೆ, ಪಿಹೆಚ್ದಿ ಶೋಷಣೆಗಳ ಬಗ್ಗೆ, ಹಾಸಿಗೆ ರಿವಾರ್ಡುಗಳ ಬಗ್ಗೆ ನನ್ನ ಅತ್ಯಂತ ಆತ್ಮೀಯ ಉದಾರವಾದಿ ಆಪ್ತರಲ್ಲೇ ಕೇಳಿದ್ದೆ. ಅದರ ಸತ್ಯಾಸತ್ಯತೆಯನ್ನೂ ತಿಳಿದುಕೊಂಡಿದ್ದೆ. ಅವರುಗಳು ಹೇಳಿದ್ದೆಲ್ಲವೂ ಸತ್ಯವಾದರೂ ಇಂದು ಕೇಳಿದ್ದನ್ನು ಮಾತ್ರ ನಂಬಲಾಗದು, ನಂಬೆನು.


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

No comments: