ಬಸವಣ್ಣನ ಕ್ರಾಂತಿಯೂ, ಮಾ ಶೀಲಾಳ ಭ್ರಾಂತಿಯೂ!

ಬಸವಣ್ಣನ ಕ್ರಾಂತಿಯೂ, ಮಾ ಶೀಲಾಳ ಭ್ರಾಂತಿಯೂ!

ವೀರಶೈವ ಲಿಂಗಾಯತ ಲೇಖನದ ನಂತರ ಸಾಕಷ್ಟು ಪ್ರಶಂಸೆಗಳು ಮತ್ತು ಪ್ರಶ್ನೆಗಳೂ ಬಂದಿದ್ದವು. ಪ್ರಶ್ನೆಗಳಿಗೆಲ್ಲ ತಕ್ಕ ಉತ್ತರವ ಕೊಟ್ಟಿದ್ದರೂ ಕೆಲವರು ಅಲ್ಲಮ, ಅಕ್ಕಮಹಾದೇವಿಯರು ತಮ್ಮ ವಚನಗಳ್ಯಾವುದಾದರಲ್ಲಿ ತಾವು ಬಸವಣ್ಣನನ್ನು ಭೆಟ್ಟಿಯಾಗುವ ಮೊದಲೇ ಲಿಂಗಧಾರಣೆಯಾಗಿ ವೀರಶೈವರಾಗಿದ್ದೆವೆಂದು ಹೇಳಿಕೊಂಡಿದ್ದಾರೆಯೇ ಎಂದು ಕೇಳುತ್ತಿದ್ದರು. ಬಹುಶಃ ಅಕ್ಕ, ಅಲ್ಲಮ, ಬಸವರಿಗೆ ಇಪ್ಪತ್ತೊಂದನೇ ಶತಮಾನದಲ್ಲಿ ಈ ಸಮಸ್ಯೆಯ ಅಂದಾಜಿದ್ದಿದ್ದರೆ ಜನ್ಮಪತ್ರದ ದಾಖಲೆಯನ್ನೇ ಕೊಟ್ಟಿರುತ್ತಿದ್ದರೇನೋ!

ಯಾವುದೇ ಐತಿಹಾಸಿಕ ಘಟನೆಯನ್ನು ವಿವಿಧ ಆಕಾರ ಮೂಲಗಳ ಸಹಾಯದ ಅಂತರ್ ಶಿಸ್ತೀಯ ಅಧ್ಯಯನ ಮಾತ್ರ ಚರಿತ್ರೆಯ ವಾಸ್ತವಾಂಶ ಗ್ರಹಿಸಲು ಸಾಧ್ಯವಾಗಿಸುವುದು. ಇದು ಅಕ್ಷರಶಃ ಸತ್ಯ.

ಈ ತರಲೆ ಪ್ರಶ್ನೆಗಳಿಂದ ಕೊಂಚ ಟಿವಿ ನೋಡೋಣವೆಂದು ಇಂದಿನ ಸೆನ್ಸೇಷನಲ್ ಡಾಕ್ಯುಮೆಂಟರಿ ಆಗಿರುವ "ವೈಲ್ಡ್ ವೈಲ್ಡ್ ಕಂಟ್ರಿ" ವೀಕ್ಷಿಸತೊಡಗಿದೆನು.

ಭಾರತದಲ್ಲಿ ರಜನೀಶ್ ಆಶ್ರಮದ ಬುಡ ಅಲುಗಾಡಲಾರಂಭಿಸಿದಾಗ ಹೊಸ ಸ್ಥಳದ ಹುಡುಕಾಟ ಅವರನ್ನು ಅಮೆರಿಕಾದ ಒರೆಗಾನ್ ಗೆ ತರುತ್ತದೆ. ಅವರ ಆತ್ಮೀಯ ಸೇವಕಿಯಾದ ಸನ್ಯಾಸಿನಿ ಮಾ ಶೀಲಾ ಆನಂದ್ ಹೇಗೆ ಕ್ಷಿಪ್ರವಾಗಿ ಆಶ್ರಮವನ್ನು ಕಟ್ಟಿ ಬೆಳೆಸಿದಳೆಂಬುದನ್ನು ತೋರುತ್ತದೆ. ಆದರೆ ರಜನೀಶ್ ಧರ್ಮದ ಕ್ಷಿಪ್ರ ಬೆಳವಣಿಗೆ, ಮಹತ್ವಾಕಾಂಕ್ಷೆಗೆ ಅಲ್ಲಿನ ಸ್ಥಳೀಯರು ತೊಡಕಾಗುತ್ತಾರೆ. ಆಗ ಚತುರ್ಮತಿಯಾದ ಶೀಲಾ ಅಲ್ಲಿನ ಪ್ರಮುಖ ಪಟ್ಟಣಗಳಾದ ಸ್ಯಾನ್ ಫ್ರಾನ್ಸಿಸ್ಕೊ, ಎಲ್.ಎ, ಶಿಕಾಗೋ, ಸಿಯಾಟಲ್ ಗಳಿಂದ ವಸತಿಹೀನ ನಿರ್ಗತಿಕರನ್ನು ಊಟ, ವಸತಿ, ಬಿಯರ್ ಸೌಕರ್ಯಗಳನ್ನು ಒದಗಿಸುವುದಾಗಿ ಕರೆತಂದು ಮತದಾರರಾಗಿ ನೋಂದಾಯಿಸಿ ಚುನಾವಣೆಯಲ್ಲಿ ರಜನೀಶ್ ಭಕ್ತರು ಗೆಲ್ಲುವಂತೆ ನೋಡಿಕೊಳ್ಳುತ್ತಾಳೆ.

ಮುಂದೆ ರಜನೀಶ ಮೇಲಿನ ಪ್ರೇಮ, ರಾಗ ದ್ವೇಷ ಅಸೂಯೆಗಳಿಗೆ ಬಲಿಯಾಗಿ ಆಶ್ರಮವನ್ನು ಬಿಟ್ಟು, ನಂತರ ರಜನೀಶರು ತಮ್ಮ ನೂತನ ಧರ್ಮವನ್ನು ಪರಿಸಮಾಪ್ತಿಗೊಳಿಸಿ ಭಾರತಕ್ಕೆ ಹಿಂದಿರುಗುತ್ತಾರೆ.

ಡಾಕ್ಯುಮೆಂಟರಿ ನೋಡುತ್ತಾ ನನಗೆ ಅರೆ ಮಾ ಶೀಲಾಳ ಕ್ರಾಂತಿ ಕೂಡಾ ಬಸವ ಕ್ರಾಂತಿಯಂತೆಯೇ ಇದೆಯಲ್ಲ, ಎಂತಹ ಸಾಮ್ಯತೆ!

ಅಲ್ಲಿ ಬಸವ ತನ್ನ ಗುರು ಸದ್ಯೋಜಾತರಿಂದ ಲಿಂಗಧಾರಿಯಾಗಿ ತಾನು ಕಂಡುಕೊಂಡ ಆ ಹೊಸ ವೀರಶೈವ ಧರ್ಮವನ್ನು ಪ್ರಸರಿಸಬೇಕೆಂಬ ಮಹತ್ವಾಕಾಂಕ್ಷಿಯಾಗಿ ನಿರ್ಗತಿಕರಿಗೆ ಲಿಂಗ ಕಟ್ಟುವ ಕ್ರಾಂತಿಯಲ್ಲಿ ತೊಡಗಿದರೆ, ಇಲ್ಲಿ ಮಾ ಶೀಲಾ ಕೂಡ ತಮ್ಮ ಸಂಖ್ಯೆಯನ್ನು ವೃದ್ಧಿಸಲು ನಿರ್ಗತಿಕರನ್ನೇ ಆಶ್ರಯಿಸಿದ್ದಳು.

ಅಲ್ಲಿ ಬಸವ ತನ್ನ ಅನುಯಾಯಿಗಳ ಕಂಡು,
ಬಡಹಾರುವನೇಸು ಭಕ್ತನಾದಡೆಯೂ ನೇಣಿನ ಹಂಗ ಬಿಡ!
ಮಾಲೆಗಾರನೇಸು ಭಕ್ತನಾದಡೆಯೂ ಬಾವಿಯ ಬೊಮ್ಮನ ಹಂಗ ಬಿಡ!
ಬಣಜಿಗನೇಸು ಭಕ್ತನಾದಡೆಯೂ ಒಟ್ಟಿಲ ಬೆನಕನ ಹಂಗ ಬಿಡ!
ಕಂಚುಗಾರನೇಸು ಭಕ್ತನಾದಡೆಯೂ ಕಾಳಿಕಾದೇವಿಯ ಹಂಗ ಬಿಡ!
ನಾನಾ ಹಂಗಿನವನಲ್ಲ, ನಿಮ್ಮ ಶರಣರ ಹಂಗಿನವನಯ್ಯ                                     ಕೂಡಲಸಂಗಮದೇವಾ.
ಎಂದು ಕರುಬಿದರೆ, ಇಲ್ಲಿ ಮಾ ಶೀಲಾ ತನ್ನ ನಿರ್ಗತಿಕರಿಂದ ಭ್ರಮೆ ನಿರಶನ ಗೊಂಡು ಅವರನ್ನು ಆಶ್ರಮದ ಹೊರಹಾಕುತ್ತಾಳೆ!

ಕ್ಷಿಪ್ರವಾಗಿ ಬೆಳೆದು, ಅಷ್ಟೇ ಕ್ಷಿಪ್ರವಾಗಿ ಅವಸಾನಗೊಂಡ ಬಸವ ಕ್ರಾಂತಿಯಂತೆಯೇ ಶೀಲಾಳ ಭ್ರಾಂತಿ ಕೂಡ ಪರ್ಯವಸಾನಗೊಳ್ಳುತ್ತದೆ.

ಬಸವನಿರದಿದ್ದರೆ ವೀರಶೈವ ಯಾ ಲಿಂಗಾಯತ ಧರ್ಮ/ಪಂಥ ಹೇಗಿರುತ್ತಿತ್ತೋ ಹಾಗೆಯೇ ಬಸವನ ನಂತರ ಕೂಡಾ ಇಷ್ಟಲಿಂಗ, ಶಿವಲಿಂಗ, ಗುಡಿ, ಮಠಗಳೊನ್ನೊಳಗೊಂಡು ಮುಂದುವರಿಯುತ್ತಿದೆ.

ಇತ್ತ ಮಾ ಶೀಲಾಳಿಲ್ಲದೇ, ರಜನೀಶ್ ಪಂಥ ಯಥಾಗತಾ ಮುಂದುವರಿಯುತ್ತಿದೆ.

ಆಗಾಗ ಕ್ರಾಂತಿಕಾರಿಗಳು ಬರುತ್ತಾರೆ ಹೋಗುತ್ತಾರೆ. ಆದರೆ ಇಲ್ಲಿ ಯಾರೂ ಮುಖ್ಯರಲ್ಲ, ಅಮುಖ್ಯರಲ್ಲ! ಕಾಲಚಕ್ರ ಸದಾ ಉರುಳುತ್ತಿರುತ್ತದೆ.

ದೇವ ದೇವರಲ್ಲಿ ಸಂಘರ್ಷ ನಡೆದರೆ ಬಲಿಯಾಗುವುದು ಭಕ್ತರೇ.

ನವೀನ ಲಿಂಗಾಯತ ಧರ್ಮ ತಮ್ಮ ಅಂಗೈಯ ಇಷ್ಟಲಿಂಗವಲ್ಲದೆ ಯಾವುದೇ ದೇವಸ್ಥಾನದ ಶಿವಲಿಂಗಗಳನ್ನು ಪೂಜಿಸುವುದಿಲ್ಲವೆನ್ನುತ್ತದೆ. ಆದರೆ ವಚನಕಾರರ ಕೂಡಲಸಂಗಮದೇವ, ಚೆನ್ನಮಲ್ಲಿಕಾರ್ಜುನ, ಗುಹೇಶ್ವರ, ಕಪಿಲಸಿದ್ದ ಮಲ್ಲಿನಾಥವೆಲ್ಲವೂ ಗುಡಿಯಲ್ಲಿ ಶಿಲೆಯಾಗಿರುವ ಶಿವಲಿಂಗಗಳೇ ಎಂಬ ಮೂಲ ವಿಷಯವನ್ನೇ ಮರೆಯುತ್ತದೆ. ಪುರಾತನ ಮತ್ತು ನವೀನ ಲಿಂಗಾಯತರ ಬೀಜಮಂತ್ರ "ಓಂ ಶಿವಾಯ ನಮಹ"ವೇ ಆಗಿದೆ.

ಇರಲಿ ಈ ಐತಿಹಾಸಿಕ ಸತ್ಯಗಳಿಂದೇನಾಗಬೇಕಿದೆ?

ಅದು ಬೌದ್ಧರ ಹಿನಾಯಾನ, ಮಹಾಯಾನ, ಮಾಧ್ಯಮಿಕ ಆಗಿರಬಹುದು. ಜೈನರ ದಿಗಂಬರ, ಶ್ವೇತಾಂಬರವಿರಬಹುದು. ಕ್ಯಾಥೋಲಿಕ್ ಪ್ರೊಟೆಸ್ಟಂಟ್,  ಸುನ್ನಿ ಶಿಯಾ, ದಲಿತರ ಎಡಗೈ ಬಲಗೈ ಆಗಬಹುದು. ನಿಮ್ಮ ನಂಬಿಕೆ ನಿಮ್ಮ ಧರ್ಮವಾಗಬಹುದು.

ಧರ್ಮಕ್ಕೆ ನಂಬಿಕೆ ಮುಖ್ಯ. ನಂಬಿಕೆ ದೇವರನ್ನು ಸೃಷ್ಟಿಸುತ್ತದೆ, ರೂಪಿಸುತ್ತದೆ ಮತ್ತು ಧರ್ಮವಾಗಿಸುತ್ತದೆ!

No comments: