ಅಂಬೇಡ್ಕರ್ ವಾದಿಗಳ ಗುರಾಣಿ

 ನಾನೊಬ್ಬ ನಾಸ್ತಿಕ. ನನ್ನನ್ನು ಬಿಟ್ಟರೆ ಅನ್ಯ ದೇವರು ಇಲ್ಲ ಎಂಬುದೇ ನನ್ನ ತತ್ವ. ಆದರೆ ನಾನೊಬ್ಬ ಸಹಮಾನವ, ಸಾಮಾಜಿಕ ಜೀವಿ. ಹಾಗಾಗಿ ನನ್ನ ಸಹಜೀವಿಗಳ ನಂಬಿಕೆಯನ್ನು ಗೌರವಿಸುತ್ತೇನೆ. ಹಾಗೆಯೇ ಮೌಢ್ಯವನ್ನು ಖಂಡಿಸುತ್ತೇನೆ. ಯಾರಾದರೂ ಒಂದು ಕಲ್ಲನ್ನು ಪೂಜಿಸುತ್ತಿದ್ದರೆ ಅದನ್ನು ಗೌರವಿಸುತ್ತೇನೆ. ಹಾಗೆಯೇ ಯಾರಾದರೂ ಒಂದು ಕಲ್ಲನ್ನು ತಂದು 'ನಾಸ್ತಿಕ ಎನ್ನುವಿಯಲ್ಲ ಇದರ ಮೇಲೆ ಮೂತ್ರ ಮಾಡು ನೋಡೋಣ' ಎಂದು ಸವಾಲು ಹಾಕಿದರೆ, ಸವಾಲು ಗೆಲ್ಲುತ್ತೇನೆ. 


ಇದು ನನ್ನ ವೈಜ್ಞಾನಿಕ, ಮಾನವಿಕ, ಸಾಮಾಜಿಕ ನಿಲುವು.


ಈಗ ನನ್ನಂತಹದೇ ನಿಲುವಲ್ಲದಿದ್ದರೂ ಅದಕ್ಕೂ ಮೀರಿದ ನಿಲುವು ಕನ್ನಡ ನಾಡಿನ ಉದಾರವಾದಿ, ಧರ್ಮನಿರಪೇಕ್ಷ, ಸಂವಿಧಾನಬದ್ಧ, ವೈಜ್ಞಾನಿಕ, ಸಮಸಮಾಜದ ಕಳಕಳಿಯ ಚಿಂತಕರದ್ದು! ಅದು ಇತ್ತೀಚಿನ ಚಂದ್ರಯಾನ ಉಡಾವಣೆ ಸಮಯದಲ್ಲಿ ಕುಂಭದ್ರೋಣ ವರ್ಷಧಾರೆಯಂತೆ ಧರಾ"ಶಾಯಿ"ಯಾಗಿ ಹರಿದಿದೆ. ಆದರೆ ಇದು ನನಗೆ ಅವರ ಮಾನಸಿಕ ದ್ವಂದ್ವವಾಗಿ ಕಾಣುತ್ತಿದ್ದೆ. ಏಕೆಂದರೆ ಮನೋವೈಜ್ಞಾನಿಕ ವಿಶ್ಲೇಷಣೆ ನನ್ನ ಆಸಕ್ತಿ. ನಾನು ಗುರುತಿಸಿದ ಅವರ ದ್ವಂದ್ವಗಳು ಸಾಕಷ್ಟಿದ್ದರೂ ಈ ಎರಡು ಇಂದಿಗೆ ಸಾಕು:


* ವಿಜ್ಞಾನಿಗಳು ವೈಜ್ಞಾನಿಕವಾಗಿ ಇರಬೇಕು. "ಬಾಬಾ ಸಾಹೇಬ"ರ ಸಂವಿಧಾನದ ಪ್ರಜಾಪ್ರಭುತ್ವ ಸಂಸ್ಥೆಗಳಲ್ಲಿ ಪೂಜೆ ಪುನಸ್ಕಾರ ಸಲ್ಲದು.


ಹೌದು, ವಿಜ್ಞಾನಿಗಳು ವೈಜ್ಞಾನಿಕವಾಗಿ ಇರಬೇಕು. ಅವರು ಧಾರ್ಮಿಕ ಮೌಢ್ಯ ಹೊಂದಿರಬಾರದು. ಆದರೆ ಆ ವಿಜ್ಞಾನಿಗಳು ಪೂಜೆಯನ್ನು ಸರ್ಕಾರದ ಭಾಗವಾಗಿ ಮಾಡದೆ ಮನೆಯಲ್ಲಿ ಮಾಡಿಕೊಳ್ಳಲಿ ಎಂಬ ಉದಾರ ಮಾಫಿ ಏಕೆ? ವಿಜ್ಞಾನಿ ವೈಜ್ಞಾನಿಕವಾಗಿ ಇರಬೇಕು ಎಂದ ಮೇಲೆ ಈ ದ್ವಂದ್ವ ನಿಲುವು ಏಕೆ?


"ಬಾಬಾ ಸಾಹೇಬ"ರ ಸಂವಿಧಾನಬದ್ಧ ಸರ್ಕಾರವೇ ವೈಜ್ಞಾನಿಕ ಇಸ್ರೋ ಸಂಸ್ಥೆ, ಧಾರ್ಮಿಕ ಮುಜರಾಯಿ, ವಕ್ಫ್, ಇತ್ಯಾದಿ ಏಕೆ ನಡೆಸುತ್ತಿದೆ? ಇದು ಸರ್ಕಾರದ ದ್ವಂದ್ವವಲ್ಲವೇ!? ಸರ್ಕಾರ ಈ ತಪ್ಪನ್ನು ಸರಿಪಡಿಸಿಕೊಂಡರೆ ಜನರು ತಾವಾಗೇ ಸರಿಯಾಗುತ್ತಾರಲ್ಲವೇ!


*  "ಬಾಬಾ ಸಾಹೇಬ"ರ ಸಾಂವಿಧಾನಿಕ ಬಹುತ್ವ ಭಾರತದಲ್ಲಿ ಹೇರಿಕೆ ಸಲ್ಲ.


ಉದಾರವಾದಿ ಚಿಂತಕರ ಈವರೆಗಿನ ಚಿಂತನೆಯ ಮಹಾಮಜಲೇ ಹೇರಿಕೆ. ಅವರ ಪ್ರತಿಯೊಂದು ಚಿಂತನೆ ಹೇರಿಕೆಯೇ ಆಗಿದೆ ಎಂದು ನಿತ್ಯ ದೃಢವಾಗಿ ಕಂಗೊಳಿಸುತ್ತಿದೆ. ಮುಖ್ಯಮಂತ್ರಿ ಯಾರ ಕೈ ಕುಲುಕಬೇಕು, ಯಾರನ್ನು ಅಪ್ಪಬೇಕು ಎಂದು ಸಾರ್ವತ್ರಿಕವಾಗಿ ಹೇರುವ ಇವರು ಖಾಸಗಿಯಾಗಿ ಏನೇನು ಬಹು ಬಹುತ್ವಗಳನ್ನು  ಮುಮ ಅವರ ಮೈಮೇಲೆ ಹೇರುವರೋ....!


ಚಂದ್ರಯಾನಕ್ಕೆ ತಿರುಪತಿ ನಾಮ ಎಂದ ಉಪನ್ಯಾಸಕರ ಕಾಲೇಜಿನಲ್ಲಿ ಫೋಟೋ ಎಷ್ಟಿವೆ, ಊದುಬತ್ತಿ ಹಚ್ಚುತ್ತಾರೆಯೇ, ಪೂಜೆಗಳು ಆಗುತ್ತವೆಯೇ ಎಂಬುದನ್ನೇ ಖಂಡಿಸದ ಆ ಉಪನ್ಯಾಸಕರು ಲೋಕಕ್ಕೆ ನಾಮ ಹಾಕುತ್ತಿಲ್ಲವೆ ಎಂಬ ಖಾತ್ರಿಯೇ ಇಲ್ಲ! ಆದರೆ ಇಸ್ರೋ ವಿಜ್ಞಾನಿಗಳು ಭತ್ಯೆ ಪಡೆದು ಪೂಜೆ ಮಾಡಿಸಿದರೆ ಎಂಬ ಖಾತ್ರಿ ಇರುವಂತೆ ಲೋಕಕ್ಕೆ ನಾಮ ಹಾಕಲು ಹೊರಟಿದ್ದರು. "ಎತ್ತು ಈಯಿತು ಎಂದರೆ ಕೊಟ್ಟಿಗೆಗೆ ಕಟ್ಟು" ಎಂಬಂತೆ!


ಇನ್ನೂ ಮಜಾ ಎಂದರೆ "ಮುಸ್ಲಿಂ ಚಿಂತಕರ ಚಾವಡಿ" ಎಂಬ ಧಾರ್ಮಿಕ ಜೋಡಣೆ ಇರುವ ಉದಾರವಾದಿ, ವೈಜ್ಞಾನಿಕ, ಸಾಮಾಜಿಕ, "ಧರ್ಮನಿರಪೇಕ್ಷ" ವ್ಯಕ್ತಿಗಳು ಈ ಚಂದ್ರಯಾನ ಪೂಜೆ ಖಂಡಿಸುವಲ್ಲಿ ಮುಂಚೂಣಿಯಲ್ಲಿರುವುದು. ಮೊದಲು ಅವರು ತಾವು ಅಲ್ಲಾಹ್ ಸಮೇತ ಯಾವ ದೇವರನ್ನೂ ನಂಬುವುದಿಲ್ಲ. ಕಾಬಾ ಎಂಬುದು ಕೇವಲ ಕಲ್ಲು ಎಂದು ತಮ್ಮ ವೈಜ್ಞಾನಿಕ ನಿಲುವನ್ನು ಸ್ಪಷ್ಟಪಡಿಸಿ ಈ ಹೋರಾಟ ಕೈಗೊಳ್ಳಲಿ. ಇಲ್ಲದಿದ್ದರೆ ಜನತೆಯ ಕ್ಷಮೆ ಕೋರಿ "ಮುಸ್ಲಿಂ ಚಿಂತಕರ ಚಾವಡಿ" ಬರಖಾಸ್ತುಗೊಳಿಸಲಿ. ಅಲ್ಲಿಯವರೆಗೆ ಅವರಿಗೆ ಚಂದ್ರಯಾನವಲ್ಲದೆ ಯಾವ ಧಾರ್ಮಿಕ ವಿಷಯವಿರಲಿ, ಮೌಢ್ಯವನ್ನು ಸಹ ಖಂಡಿಸುವ ನೈತಿಕತೆ ಇಲ್ಲ.


ಇಲ್ಲಿ "ಬಾಬಾ ಸಾಹೇಬ"ರ ಎಂಬುದನ್ನು ""ನಲ್ಲಿ ಏಕೆ ಹಾಕಿದ್ದೇನೆಂದರೆ ಬಾಬಾ ಸಾಹೇಬರನ್ನು ಇವರು ಗುರಾಣಿಯಾಗಿ ಬಳಸುತ್ತಿದ್ದಾರೆ. ತಮ್ಮ ಪೊಳ್ಳುವಾದದ ರಕ್ಷಣೆಗೆ ಅಂಬೇಡ್ಕರ್ ಅವರನ್ನು ಗುರಾಣಿಯಾಗಿಟ್ಟುಕೊಂಡಿರುವ ಇವರಿಂದ ಸಮಾಜ ಎಚ್ಚರದಿಂದ ಇರಬೇಕು. ಏಕೆಂದರೆ ನಾಮ ಹಾಕಿದ ಉಪನ್ಯಾಸಕ ಸಹ ತನ್ನ ವಾದಕ್ಕೆ "ಬಾಬಾ ಸಾಹೇಬ"ರ ಗುರಾಣಿಯನ್ನೇ ಬಳಸಿದ್ದು.


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

No comments: