ಏಕಪತ್ನೀವೃತ!

 ಅಮೆರಿಕಾದ 2008 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿದ್ದ ಜಾನ್ ಎಡ್ವರ್ಡ್ ಮದುವೆಯಾಚೆಯ ಸಂಬಂಧದಲ್ಲಿ ಸಿಲುಕಿ ರಾಜಕೀಯ ರಂಗದಿಂದ ಮಾಯವಾಗಿ ಹೋದ.


ಬಿಲ್ ಕ್ಲಿಂಟನ್ ಇಂತಹುದೇ ಸಂಬಂಧದಲ್ಲಿ ಸಿಲುಕಿ impeachment ವರೆಗೆ ಬಂದಿದ್ದ.


ನ್ಯೂಯಾರ್ಕ್ ಗವರ್ನರ್ ಆಗಿದ್ದ ಈಲಿಯಟ್ ಸ್ಪಿಟ್ಝರ್ ವೇಶ್ಯೆಯೊಂದಿಗಿನ ಸಂಬಂಧದಲ್ಲಿ ಸಿಲುಕಿ ರಾಜಕೀಯ ರಂಗದಿಂದಲೇ ಕಣ್ಮರೆಯಾದ.


ಹೀಗೆ ಅಮೆರಿಕ ಅಲ್ಲದೆ ಯುರೋಪ್ ಮತ್ತಿತರೆ "ಮುಂದುವರಿದ" ದೇಶಗಳಲ್ಲಿನ ಸಾರ್ವಜನಿಕ ಸೇವೆಯಲ್ಲಿರುವ ಸಾಕಷ್ಟು ರಾಜಕಾರಣಿಗಳು ವಿವಾಹೇತರ ಸಂಬಂಧಗಳಲ್ಲಿ ಸಿಲುಕಿ ತಮ್ಮ ಹುದ್ದೆಗಳನ್ನು ಕಳೆದುಕೊಳ್ಳುವುದಿರಲಿ, ರಾಜಕೀಯದಿಂದಲೇ ಅಸ್ತಂಗತರರಾಗಿ ಹೋಗಿದ್ದಾರೆ.


ಇಲ್ಲಿ "ಮುಂದುವರಿದ" ಎಂದರೆ ಮುಕ್ತ-ಕಾಮ, ಸಂಸ್ಕೃತಿಯಿಲ್ಲದ, ನಾಸ್ತಿಕತೆಯ, ಉದಾರವಾದದ, ಅನೈತಿಕತೆಯ, ಆಲ್ಕೋಹಾಲ್/ಡ್ರಗ್ಸ್ ಚಟದ, ಮನುಷ್ಯರೇ ಅಲ್ಲದ ಬಿಳಿ, ಕರಿ, ಹಳದಿ, "ಭಾರತೀಯರಲ್ಲದ-ಕಂದು" ಜನಾಂಗದ ಜನ ಎಂಬ ಭಾರತೀಯ-ಬಿಂಬಿತ ವಿದೇಶೀಯರು ಎಂದೇ ಅರ್ಥೈಸಿಕೊಳ್ಳಿ, ಭಾರತೀಯ ಶುದ್ಧ ದೇಸೀ ತಳಿಯ ಗೋವುಗಳಂತೆ!


ಇಂತಹ ಮುಕ್ತ ವಾತಾವರಣದ ಪಾಪಿ ಜನ, ಒಂದು ಯಕಶ್ಚಿತ್ ವಿವಾಹೇತರ ಸಂಬಂಧದಲ್ಲಿ ಸಿಲುಕಿದ ತಮ್ಮ ಜನ ಪ್ರತಿನಿಧಿಗಳು ಕೆರಿಯರ್ ಕಳೆದುಕೊಳ್ಳುವಂತೆ ಮಾಡಿದ್ದಾರೆ ಏಕೆ?! 


ಏಕೆಂದರೆ, ಈ ಎಲ್ಲಾ "ಅನಿಷ್ಟ" ಸಂಸ್ಕೃತಿಯ ನಡುವೆಯೂ ನೈತಿಕತೆ, ಪ್ರಾಮಾಣಿಕತೆ, ಕಮಿಟ್ಮೆಂಟುಗಳನ್ನು  ಈ ಸಂಸ್ಕೃತಿಹೀನರು ಗೌರವಿಸುತ್ತಾರೆಂದಲ್ಲವೇ!?!?! ಅದಕ್ಕೆ ಪೂರಕವಾಗಿ ಮೇಲೆ ಹೇಳಿದ ಉದಾಹರಣೆಗಳಿದ್ದಾವಲ್ಲವೇ!?!


ಈಗ ಅದೇ ಉತ್ಕೃಷ್ಟ ಭಾರತೀಯ ಸಂಸ್ಕೃತಿ, ಏಕಪತ್ನಿವೃತಸ್ಥ ಶ್ರೀರಾಮಚಂದ್ರನ ಆದರ್ಶದ, ವಿಶ್ವಕ್ಕೇ ಸಂಸ್ಕೃತಿಯನ್ನು ದಯಪಾಲಿಸಿದ ಭಾರತವೆಂಬೋ ಭಾರತದಲ್ಲಿ ಏನಾಗುತ್ತಿದೆ?!?


ದಿಗ್ವಿಜಯ ಎಂಬೋ ಲಂಪಟನೊಬ್ಬ ಒಂದು ರಾಷ್ಟ್ರೀಯ ಪಕ್ಷದ ವಕ್ತಾರನಾಗಿದ್ದ.


ಕರುನಾಡಿನಲ್ಲೇ ಮತ್ತೊಬ್ಬ ಲಂಪಟ ಮುಖ್ಯಮಂತ್ರಿಯಾಗಿದ್ದ, ಮತ್ತು ಈಗಲೂ ಒಂದು ಪಕ್ಷದ ಪ್ರಮುಖನಾಗಿದ್ದಾನೆ.


ಸಂಸ್ಕೃತಿಯನ್ನೇ ಗುತ್ತಿಗೆ ಹಿಡಿದಿರುವ, ಬ್ರಹ್ಮಚರ್ಯವನ್ನು ಪರಿಪಾಲಿಸುವ, ವಿಶ್ವಗುರು ಎಂದು ಪ್ರಖ್ಯಾತರಾಗಿರುವ, ಏಕಪತ್ನೀವೃತಸ್ಥ ಶ್ರೀರಾಮಚಂದ್ರನ ಮಂದಿರ ಕಟ್ಟುತ್ತಿರುವ ಆಡಳಿತ ಪಕ್ಷದ ಮತ್ತೊಬ್ಬ ಲಂಪಟ ಈಗಷ್ಟೇ ಬಟಾಬಯಲಾಗಿದ್ದಾನೆ.


ಇಂತಹ ಸಂಬಂಧಗಳನ್ನು ಜನರೂ ಅಷ್ಟೇ ಸುಸಂಸ್ಕೃತರಾಗಿ ಅದು ಅವನ ವೈಯಕ್ತಿಕ ವಿಷಯ, ಒಪ್ಪಿತ ಕಾಮ, ಅದಕ್ಕೆಲ್ಲಾ ನಾವು ತಲೆ ಕೆಡಿಸಿಕೊಳ್ಳಬಾರದು ಇತ್ಯಾದಿಯಾಗಿ ಸಂಸ್ಕೃತಿಯ ಅಣಿಮುತ್ತುಗಳನ್ನು ಉದುರಿಸುತ್ತಿದ್ದಾರೆ. ಯಾವುದು ಸಂಸ್ಕೃತಿ? ಯಾವುದು ವಿಸ್ಮೃತಿ?


ಅದೇ ವಿಸ್ಮೃತಿಯ ದೇಶಗಳ ಜನ, ಮುಕ್ತಕಾಮವನ್ನು ಆಚರಿಸಿ ಒಬ್ಬಳನ್ನು ತನ್ನ ಜೀವನದ "ಜೀವನ ಸಂಗಾತಿ"ಯೆಂದು ಆಯ್ದುಕೊಂಡು ಆಕೆಗೆ ಬದ್ಧನಾಗಿರದ ವ್ಯಕ್ತಿಯೋರ್ವನಿಂದ ಜನಸೇವೆಯಲ್ಲಿ ನೈತಿಕತೆ ಇರಬಲ್ಲುದೆ ಎಂದು ಆತನನ್ನು ಶೂನ್ಯರಾಗಿಸುತ್ತಿದ್ದಾರೆ! 


ಈಗ ಹೇಳಿ ಸಂಸ್ಕೃತಿ, ನೈತಿಕತೆ, ಬದ್ಧತೆ, ಸತ್ಯ, ಪ್ರಾಮಾಣಿಕತೆ, ಪ್ರೀತಿ, ಪ್ರೇಮ, ತ್ಯಾಗ, ಆದರ್ಶ ಇತ್ಯಾದಿಗಳು ಎಲ್ಲಿವೆ?


ದನ ತಿನ್ನುವ ಗೋಹತ್ಯಾ ಪಾಪದ, ಹಂದಿ ತಿನ್ನುವ ಧರ್ಮ ಭ್ರಷ್ಟರ ನಡುವೆಯೇ ಸತ್ಯ, ನೈತಿಕತೆ, ಪ್ರಾಮಾಣಿಕತೆ, ಬದ್ಧತೆ, ತ್ಯಾಗ, ಆದರ್ಶ, ಪ್ರೇಮಗಳು ಹೆಚ್ಚು ಕ್ರಿಯಾಶೀಲವಾಗಿವೆ.


ಸದ್ಧರ್ಮ, ಸಚ್ಛಾರಿತ್ರ್ಯ, ಅನುಪಮ ಬ್ರಹ್ಮಚರ್ಯದ ಮೋಡಿಯ ವಿಶ್ವಗುರುಗಳೇ - ಮೊದಲು ನಿಮ್ಮ ಪಕ್ಷದ ಮನೆ ಎಂಬೋ ಮನೆಯನ್ನು ಗುಡಿಸಿ, ಸಾರಿಸಿ, ರಂಗವಲ್ಲಿ ಇಟ್ಟು, ಶ್ರೀರಾಮನ ಆದರ್ಶವನ್ನು ಎತ್ತಿ ಹಿಡಿಯಿರಿ. ನಂತರ ಇಸ್ವಗುರುವಾಗಿ! 


ಮನೆ ಗೆದ್ದು, ಮಾರು ಗೆಲ್ಲು ಎಂಬುದು ಸಹ ಭಾರತೀಯ ಸಂಸ್ಕೃತಿ.


ವಿಪರ್ಯಾಸವೆಂದರೆ, ಈ ಬಗ್ಗೆ ವಿದೇಶದಲ್ಲೇ ವಾಸವಿದ್ದು ಬಂದ, ಇನ್ನೂ ವಾಸವಿರುವ ಅನೇಕ ಅಂಕಣಕಾರರು ಸಹ ಕೂಪಮಂಡೂಕಗಳಂತೆ ಅವೇ ಹಳಸಲು ಭಾರತೀಯ ಪರಂಪರೆ, ಸಂಸ್ಕೃತಿ, A2 ಹಾಲು, ಗೋವು ಎಂಬ ಲಾಲಿ ಪಾಪ್ ಚೀಪುವುದು, ಚೀಪಿಸುವುದು ನಗು ತರಿಸುತ್ತದೆ. ಅಯ್ಯಾ, ಕಾಮಶಾಸ್ತ್ರದ ನಾಡಿನ ವಟುಗಳೇ, ಶಾಸ್ತ್ರಕ್ಕನುಗುಣವಾಗಿ ಈಗಲಾದರೂ ಚೀಪಿ/ಚೀಪಿಸಿ, ಮುಕ್ತಿ ಹೊಂದಿ!


ತುಡುಗುಣಿಗಳಾಚಾರಕ್ಕಗಣಿತ ನೋಡಾ ನಮ್ಮ ವೀರಮಾಹೇಶ್ವರನು.

ಮನದಿಚ್ಫೆಗನುವಾದ ತನುಸುಖಪದಾರ್ಥವನು

ದಿನದಿನಕ್ಕೆ ವ್ರತವೆಂದು ತಿನಬಂದ ಶುನಕನಲ್ಲ ನೋಡಾ ನಮ್ಮ

ವೀರಮಾಹೇಶ್ವರನು.

ಮುಟ್ಟುತಟ್ಟುಗಳಿಂದೆ ಕೆಟ್ಟೆನಲ್ಲಾಯೆಂದು

ಕಟ್ಟುಕಾವಲಿಗೊಂಡು ಕೆಟ್ಟಸಿಟ್ಟುಗಳಿಂದೆ ಬಟ್ಟೆಯನು ಹಿಡಿವ

ಪಟ್ಟುಗುಡುವನಂತಲ್ಲ ನೋಡಾ ನಮ್ಮ ವೀರಮಾಹೇಶ್ವರನು.

ಮತ್ತೆಂತೆಂದೊಡೆ :

ಪರಧನ ಪರಸತಿ ಪರಹಿಂಸೆ ಪರನಿಂದೆ ಪರದೈವ

ಪರಸಮಯಾದಿ ದುರಾಸೆವಿಡಿದು

ನಡೆಯದಿಹುದೇ ಶೀಲ ನೋಡಾ ನಮ್ಮ ವೀರಮಾಹೇಶ್ವರಂಗೆ.

ತನು ಮನ ಪ್ರಾಣಾದಿ ಸಕಲ ಕರಣಾದಿ ಗುಣವಳಿದು

ಗುರುನಿರಂಜನ ಚನ್ನಬಸವಲಿಂಗನ ನೆನಹು ಬಿಡದಿಹುದೇ ವ್ರತ ನೋಡಾ

ನಮ್ಮ ವೀರಮಾಹೇಶ್ವರಂಗೆ.

- ದೇಶೀಕೇಂದ್ರ ಸಂಗನಬಸವಯ್ಯ


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

No comments: